ADVERTISEMENT

ಕಾಲು ಜಾರಿಬಿದ್ದು ನೀರು ಪಾಲಾದ ಮಗ: ಹುಡುಕಿ ಕೊಡಿ ಎಂದು ಪೋಷಕರ ಮನವಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 15:51 IST
Last Updated 26 ಜುಲೈ 2023, 15:51 IST
ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ಯುವಕ ಮಂಜುನಾಥ್‌ ಆನಂದಿ ತುಂಗಭದ್ರಾ ನದಿಗೆ ಕಾಲು ಜಾರಿ ಬಿದ್ದು ನೀರು ಪಾಲಾದ ಹಿನ್ನೆಲೆಯಲ್ಲಿ ತಂದೆ ಬಸಪ್ಪ, ತಾಯಿ ರತ್ನಮ್ಮ ಭಾವಚಿತ್ರ ಹಿಡಿದುಕೊಂಡು ನದಿ ದಂಡೆಯಲ್ಲಿ ಬುಧವಾರ ಮಗನನ್ನು ಹುಡುಕಿ ಕೊಡುವಂತೆ ಧರಣಿ ಮಾಡುವ ಮೂಲಕ ಒತ್ತಾಯಿಸಿದರು. ರೈತ ಮುಖಂಡ ಈರಣ್ಣ ಹಲಗೇರಿ ಇದ್ದಾರೆ.
ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ಯುವಕ ಮಂಜುನಾಥ್‌ ಆನಂದಿ ತುಂಗಭದ್ರಾ ನದಿಗೆ ಕಾಲು ಜಾರಿ ಬಿದ್ದು ನೀರು ಪಾಲಾದ ಹಿನ್ನೆಲೆಯಲ್ಲಿ ತಂದೆ ಬಸಪ್ಪ, ತಾಯಿ ರತ್ನಮ್ಮ ಭಾವಚಿತ್ರ ಹಿಡಿದುಕೊಂಡು ನದಿ ದಂಡೆಯಲ್ಲಿ ಬುಧವಾರ ಮಗನನ್ನು ಹುಡುಕಿ ಕೊಡುವಂತೆ ಧರಣಿ ಮಾಡುವ ಮೂಲಕ ಒತ್ತಾಯಿಸಿದರು. ರೈತ ಮುಖಂಡ ಈರಣ್ಣ ಹಲಗೇರಿ ಇದ್ದಾರೆ.   

ಕುಮಾರಪಟ್ಟಣ: ಸಮೀಪದ ಮಾಕನೂರು ಗ್ರಾಮದ ಯುವಕ ಮಂಜುನಾಥ್‌ ಆನಂದಿ (27) ತುಂಗಭದ್ರಾ ನದಿಗೆ ಕಾಲು ಜಾರಿ ಬಿದ್ದು ನೀರು ಪಾಲಾಗಿ ನಾಲ್ಕು ದಿನಗಳು ಕಳೆದಿವೆ. ಈವರೆಗೂ ಮಗನ ಸುಳಿವು ಸಿಗದ ಹಿನ್ನೆಲೆಯಲ್ಲಿ ನೊಂದ ಪೋಷಕರು ಬುಧವಾರ ಮಗನನ್ನು ಹುಡುಕಿ ಕೊಡುವಂತೆ ನದಿ ದಂಡೆಯಲ್ಲಿ ಧರಣಿ ಮಾಡಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಹಾವೇರಿ ಜಿಲ್ಲಾ ಮತ್ತು ರಾಣೆಬೆನ್ನೂರಿನ ಅಗ್ನಿಶಾಮಕ ಸಿಬ್ಬಂದಿ ಭಾನುವಾರ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಮಂಜುನಾಥ್‌ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು. ಆದರೂ ಯಾವುದೇ ಸುಳಿವು ಸಿಗಲಿಲ್ಲ. ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸ್ಥಳಕ್ಕೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದರು.

ದುಡಿಯುವ ಮಗನನ್ನು ಕಳೆದುಕೊಂಡ ತಂದೆ ಬಸಪ್ಪ ಮತ್ತು ತಾಯಿ ರತ್ನಮ್ಮ ತೀವ್ರ ಕಂಗಾಲಾಗಿದ್ದಾರೆ. ‘ನಮ್ಮನ್ನು ದುಡಿದು ಸಾಕುತ್ತಿದ್ದ,  ಮಗನ ಮುಖವನ್ನಾದರೂ ನೋಡುವ ಭಾಗ್ಯ ಕಲ್ಪಿಸಿಕೊಡಿ’ ಎಂದು ಮಗನ ಭಾವಚಿತ್ರ ಹಿಡಿದುಕೊಂಡು ಮಮ್ಮಲ ಮರುಗಿದರು.

ADVERTISEMENT

ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ‘ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಗಂಭೀರವಾಗಿ ಶೋಧ ಕಾರ್ಯ ನಡೆದಿಲ್ಲ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ನೊಂದ ಪೋಷಕರ ಮನೆಗೆ ಭೇಟಿ ನೀಡಿ ಮಗನನ್ನು ತಂದೆ-ತಾಯಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಸರ್ಕಾರದಿಂದ ಅಗತ್ಯ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಹನುಮಂತಪ್ಪ ಕುಂಬಳೂರು, ಹನುಮಂತಪ್ಪ ಆರೇರ, ಬೀರಪ್ಪ ಹುಚ್ಚಣ್ಣನವರ, ಹನುಮಂತಗೌಡ ಭರಮಗೌಡ್ರ, ಮಹಾದೇವಪ್ಪ ಬಣಕಾರ, ಬಸವಣ್ಣೆಪ್ಪ ಮುದಿಗೌಡ್ರ, ಗದಿಗೆಪ್ಪ ಕುರುಬರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.