ADVERTISEMENT

ಬೆಳೆ ಹಾನಿಗೆ ಪರಿಹಾರ ಪಾವತಿಸಿ

ಹೆಸ್ಕಾಂಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 4:59 IST
Last Updated 31 ಜುಲೈ 2022, 4:59 IST
.
.   

ಹಾವೇರಿ: ಬೆಳೆ ಹಾನಿ ಪರಿಹಾರ ಮೊತ್ತ ಪಾವತಿಗೆ ಕೆಇಬಿ ಹೆಸ್ಕಾಂ ವಿಭಾಗಕ್ಕೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಬ್ಯಾಡಗಿ ತಾಲ್ಲೂಕು ಹಿರೇಅಣಜಿ ಗ್ರಾಮದ ಚಂದ್ರಪ್ಪ ಕಳಸಪ್ಪ ಸಿಂಗಾಪೂರ ಅವರ ಸಹೋದರನ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಶಿಥಿಲಗೊಂಡ ಕಾರಣ ದಿನಾಂಕ: 19-12-2020ರಂದು ಗಾಳಿಗೆ ಒಂದಕ್ಕೊಂದು ತಾಗಿ ಶಾರ್ಟ್‌ ಸರ್ಕಿಟ್‌ ಆಗಿ 3.20 ಎಕರೆಯಲ್ಲಿ ಬೆಳೆದ ಕಬ್ಬಿನ ಬೆಳೆ ಹಾಗೂ ಬೋರವೆಲ್ ಸ್ಟಾಟರ್ ಕೇಬಲ್ ಹಾಗೂ ಪ್ಲಾಸ್ಟಿಕ್ ಪೈಪುಗಳು ಸಹ ಸುಟ್ಟು ಕರಕಲಾಗಿತ್ತು.

ಬೆಂಕಿಯ ಶಾಖದಿಂದ ಭೂಮಿ ತೇವಾಂಶ ಕಳೆದುಕೊಂಡ ಕಾರಣ ಸದರಿ ಜಮೀನಿನಲ್ಲಿ ಎರಡು ಬೆಳೆಗಳನ್ನು ಫಲಪ್ರದವಾಗಿ ಬೆಳೆಯಲು ಸಾಧ್ಯವಾಗದ ಕಾರಣ ಬೆಳೆ ನಷ್ಟ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯೆ ಉಮಾದೇವಿ ಎಸ್.ಹಿರೇಮಠ ಅವರು ಕಬ್ಬಿನಬೆಳೆ ಹಾನಿಗಾಗಿ ₹6,19,500 ಹಾಗೂ ಬೋರವೆಲ್ ಪರಿಕರ ಹಾನಿಗಾಗಿ ₹25 ಸಾವಿರ ಸೇರಿ ₹6,44,500 ಪರಿಹಾರವನ್ನು 30 ದಿನದೊಳಗಾಗಿ ನೀಡಲು ಹಾಗೂ ಮಾನಸಿಕ ಹಾಗೂ ದೈಹಿಕ ವ್ಯಥೆಗೆ ₹3 ಸಾವಿರ, ಪ್ರಕರಣದ ಖರ್ಚು ₹2 ಸಾವಿರಗಳನ್ನು ಪಾವತಿಸಲು ಹೆಸ್ಕಾಂಗೆ ಆದೇಶಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.