ಶಿಗ್ಗಾವಿ: ತಾಲ್ಲೂಕಿನ ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ವಾಣಿ ಅಲ್ಲಯ್ಯನವರನ್ನು ಮರು ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಪರ–ವಿರುದ್ಧ ಗುಂಪುಗಳಿಂದ ಬುಧವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಐ. ಮಂಜುನಾಥ ಕುರಿ ನೇತೃತ್ವದ ಪೊಲೀಸ್ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಎನ್.ಆರ್.ಜಿ. ಸಹಾಯಕ ನಿರ್ದೇಶಕ ನೃಪತಿ ಬೂಸರೆಡ್ಡಿ, ಪ್ರಕಾಶ ಔದಕರ ಸ್ಥಳಕ್ಕೆ ಭೇಟಿ ನೀಡಿದರು.
ಎರಡೂ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅವ್ಯವಹಾರ ಆರೋಪದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪಿ.ಡಿ.ಒ ವಾಣಿ ಅಲ್ಲಯ್ಯನವರನ್ನು ಹಳೆಬಂಕಾಪುರ ಗ್ರಾಮ ಪಂಚಾಯಿತಿಯಿಂದ ಗುಡ್ಡದಚನ್ನಾಪುರಕ್ಕೆ ವರ್ಗಾವಣೆ ಮಾಡಿದ ಆದೇಶವನ್ನು ರದ್ದು ಮಾಡಿ, ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಮರುನಿಯೋಜನೆ ಮಾಡಿರುವುದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಶೆಟ್ಟೆಣ್ಣವರ ನೇತೃತ್ವದಲ್ಲಿ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
‘ವಾಣಿ ಅಲ್ಲಯ್ಯನವರ ಅಧಿಕಾರಾವಧಿಯಲ್ಲಿ ಹಲವಾರು ಅವ್ಯವಹಾರ ನಡೆದಿವೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಮಾತಿಗೆ ಮನ್ನಣೆ ನೀಡದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಕೆಲವು ಸದಸ್ಯರನ್ನು ತಮಮ್ಮ ಹಿಡಿತದಲ್ಲಿ ಇರಿಸಿಕೊಂಡು, ಗ್ರಾಮದ ಅಭಿವೃದ್ಧಿ ಕಡೆಗಣಿಸಿದರು’ ಎಂದು ಆರೋಪಿಸಿದರು.
‘ಇವರ ಅಧಿಕಾರಾವಧಿಯಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಬೇಕು. ಸರ್ಕಾರದ ಆದೇಶದಂತೆ ಗುಡ್ಡದಚನ್ನಾಪುರದಿಂದ ಹಳೆಬಂಕಾಪುರ ಗ್ರಾಮಕ್ಕೆ ವರ್ಗಾವಣೆಗೊಂಡ ಕವಿತಾ ಕೊಡ್ಲಿವಾಡ ಅವರನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
ಮಾಲತೇಶ ಭಾವಿಕಟ್ಟಿ, ಸುರೇಶ ಮುರಾರಿ, ಗಂಗಮ್ಮ ಹರಿಜನ, ನಿರ್ಮಲಾ ಈಳಗೇರ, ರುಕ್ಮವ್ವ ತಳವಾರ, ರಮೇಶ ಹಿತ್ತಲಮನಿ, ಉಳವಪ್ಪ ಗುದಗಿ, ಮುದಕಪ್ಪ ಮಲ್ಲಾಡದ, ನಾಗರಾಜ ಪಾಟೀಲ, ನಾಗಣ್ಣ ಅಂಗಡಿ, ಮುರಗೆಪ್ಪ ಮುರಾರಿ, ಬಸವರಾಜ ಹರಿಜನ, ಹನುಮಂತಪ್ಪ ತಳ್ಳಿಹಳ್ಳಿ, ಸುಭಾಷ ತಳವಾರ ಇದ್ದರು.
ಸೇವೆ ಮುಂದುವರಿಸಲು ಆಗ್ರಹ
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಬೈಲವಾಳ ನೇತೃತ್ವದ ಮತ್ತೊಂದು ತಂಡ ಪಿಡಿಒ ವಾಣಿ ಅಲ್ಲಯ್ಯನವರನ್ನು ಹಳೆಬಂಕಾಪುರ ಗ್ರಾಮ ಪಂಚಾಯಿತಿಯಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿತು. ‘ವಾಣಿ ಅವರ ಅಧಿಕಾರಾವಧಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಅವರ ಸೇವೆ ಅವಶ್ಯವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.