
ಸವಣೂರು: ‘ಪಟ್ಟಣದಲ್ಲಿ ಡಿ. 10ರಂದು ಉರ್ದು ಶಾಲೆಯ ಆಂಗ್ಲ ಶಿಕ್ಷಕನ ಮೇಲೆ ಹಲ್ಲೆ ಮಾಡಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಅತ್ಯಂತ ಹೀನಾಯ, ಅಮಾನವೀಯ ಹಾಗೂ ಕ್ರೂರತ್ವದ ಕೊನೆಯ ಘಟ್ಟ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ತಾಲ್ಲೂಕಿನ ಕಾರಡಗಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗೂಂಡಾಗಳಂತೆ ವರ್ತಿಸಿ ಶಿಕ್ಷಕನನ್ನು ಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆ ಮಾಡಿರುವವರನ್ನು ಬಂಧಿಸಿ ಜೈಲಿಗೆ ಹಾಕಬೇಕು’ ಎಂದರು.
‘ಹಿಂದೂ ಶಿಕ್ಷಕನನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಲಾಗಿದೆ. ಇದು ಮೊದಲ ಘಟನೆಯಲ್ಲ. ಹಿಂದೆಯೂ ಶಾಲೆಯಲ್ಲಿ ಇಂಥ ಕೃತ್ಯ ನಡೆದಿರುವ ಮಾಹಿತಿಯಿದೆ. ಆರೋಪಿಗಳನ್ನು ಬಂಧಿಸದಿದ್ದರೆ, ಗಂಭೀರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದರು.
‘ಶಿಗ್ಗಾವಿ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಸರ್ಕಾರಿ ನೌಕರರು ಜೀವ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದಿಲ್ಲೊಂದು ಕಾರಣದಿಂದ ಕಿರುಕುಳ ನೀಡುವುದು, ಹಫ್ತಾ ವಸೂಲಿ ಮಾಡುವುದು ಸೇರಿ ಸಾಕಷ್ಟು ದೂರುಗಳು ಬಂದಿವೆ. ಶಾಸಕರು ಕೇವಲ ಒಂದು ಧರ್ಮದ ಶಾಸಕರಲ್ಲ. ಅವರು ಎಲ್ಲ ಧರ್ಮ, ಜಾತಿಗೂ ಶಾಸಕರು ಎಂಬುದನ್ನು ಮರೆಯಬಾದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.