ADVERTISEMENT

ನೆರೆ ಹಾವಳಿ ಎದುರಿಸಲು ಸನ್ನದ್ಧರಾಗಿ: ಮುದುಕಮ್ಮನವರ

ನದಿ ದಡದ ಗ್ರಾಮಗಳಲ್ಲಿ ನಿಗಾಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 3:33 IST
Last Updated 6 ಜೂನ್ 2021, 3:33 IST
ಸವಣೂರ ಪಟ್ಟಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿದರು
ಸವಣೂರ ಪಟ್ಟಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿದರು   

ಸವಣೂರ: ಪ್ರಸಕ್ತ ಸಾಲಿನ ಮುಂಗಾರು ಮಳೆ ಆರಂಭವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದ ಹಾವಳಿಯ ಮಧ್ಯೆಯೂ ನೆರೆ ಹಾವಳಿ ಎದುರಿಸಲು ಸನ್ನದ್ಧರಾಗಬೇಕು ಎಂದು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ತಿಳಿಸಿದರು.

ಪಟ್ಟಣದ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸವಣೂರ, ಶಿಗ್ಗಾವಿ, ಹಾನಗಲ್ ತಾಲ್ಲೂಕು ಅಧಿಕಾರಿಗಳ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸತತ ಎರಡು ವರ್ಷ ನೆರೆ ಹಾವಳಿಯಿಂದಾಗಿ ಮನೆಗಳು ನೆಲಸಮವಾಗಿ ಅಪಾರ ಹಾನಿಯಾಗಿತ್ತು. ಬೆಳೆ ಸಹ ನಾಶವಾಗಿ ರೈತರು ತೊಂದರೆ ಅನುಭವಿಸಿದ್ದರು. ಆದ್ದರಿಂದ, ಈ ಬಾರಿ ನೆರೆ ಹಾವಳಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಪತ್ತು ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸಮಿತಿಗಳನ್ನು ರಚನೆ ಮಾಡಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಬೇಕು. ನದಿ ದಡದ ಗ್ರಾಮಗಳಲ್ಲಿ ಬಟ್ಟೆ, ಜಾನುವಾರುಗಳನ್ನು ಮೈತೊಳೆಯಲು ನದಿಗಳಿಗೆ ಇಳಿಯದಂತೆ ಕ್ರಮವಹಿಸಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು. ನಿಷ್ಕಾಳಜಿ ತೋರುವ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹವಾಮಾನ ಇಲಾಖೆ ಮಾಹಿತಿಯಂತೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿದ್ದು, ನದಿಯ ಪಕ್ಕದಲ್ಲಿನ ಗ್ರಾಮಗಳಲ್ಲಿ ನೆರೆ ಹಾವಳಿ ಸಾಧ್ಯತೆ ಇದೆ. ಅಲ್ಲಿನ ಜನರನ್ನು ತೆರವುಗೊಳಿಸುವ ಸಂದರ್ಭ ಸಹ ಬರಬಹುದು. ಆದ್ದರಿಂದ ಇಂತಹ ಗ್ರಾಮಗಳನ್ನು ಗುರುತಿಸಿ ನಿಗಾ ವಹಿಸಬೇಕು ಎಂದರು.

ತಹಶೀಲ್ದಾರ್‌ ಸಿ.ಎಸ್.ಭಂಗಿ, ಮಂಜುನಾಥ ಮುನವಳ್ಳಿ, ಎರ್ರೀಸ್ವಾಮಿ ಪಿ.ಎಸ್, ತಾ.ಪಂ ಇಒ ಮುನಿಯಪ್ಪ ಪಿ., ಪ್ರಶಾಂತ ತುರಕಾಣಿ, ಸುನೀಲಕುಮಾರ, ಕೃಷಿ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣ ಕಟ್ಟಿಮನಿ, ರೇಣುಕಾ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.