ಹಾವೇರಿ: ‘ಕುರಿ ಸಾಕಾಣಿಕೆ ಲಾಭದಾಯಕ ಉದ್ಯೋಗವಾಗಿದೆ. ನಿರುದ್ಯೋಗ ನಿವಾರಣೆಗೆ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ. ರೈತರ ಪಾಲಿಗೆ ಕುರಿ ಹಾಗೂ ಆಡುಗಳು ಬ್ಯಾಂಕಿನ ಎ.ಟಿ.ಎಂ. ಇದ್ದ ಹಾಗೆ’ ಎಂದು ವಾರ್ತಾಧಿಕಾರಿ ಬಿ.ಆರ್. ರಂಗನಾಥ್ ಹೇಳಿದರು.
ಬರೋಡಾ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ದೇವಗಿರಿಯ ಆರ್ಸೆಟ್ ತರಬೇತಿ ಸಭಾಂಗಣದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 10 ದಿನಗಳ ಆಡು ಹಾಗೂ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಜಿ.ಪ್ರಭುದೇವ ಮಾತನಾಡಿ, ‘ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಹೊಂದಲು ಈ ತರಬೇತಿ ಆಯೋಜಿಸಲಾಗಿದೆ’ ಎಂದರು.
ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ ಹುಬ್ಬಳ್ಳಿ, ನಬಾರ್ಡ್ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮಹದೇವ ಕೀರ್ತಿ ಮಾತನಾಡಿದರು.ಬ್ಯಾಂಕ್ ಆಫ್ ಬರೋಡಾದ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಜಿ.ರವಿಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಣಾರ್ಥಿ ಸೋಮಶೇಖರ ದೇವಣ್ಣನವರ ಸ್ವಾಗತಿಸಿದರು. ಪುಟ್ಟಪ್ಪ ವಾಲಿ ಪ್ರಾರ್ಥನೆ ಮಾಡಿದರು. ಮಹಾಂತೇಶ ಮ್ಯಾಗೇರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.