ಶಿಗ್ಗಾವಿ: ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಕಡ್ಡಾಯಗೊಳಿಸುವ ದ್ವಿಭಾಷಾ ನೀತಿ ಜಾರಿಗೆ ತರಬೇಕು. ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ತೆಗೆಯಬೇಕೆಂದು ಆಗ್ರಹಿಸಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೊಣೆನವರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ‘ರಾಜ್ಯದ ಶಿಕ್ಷಣದ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರವನ್ನು ಕೈ ಬಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಸ್ಸಿ ಹಾಗೂ ಐಸಿಎಸ್ಇ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿ ಜಾರಿಗೊಳಿಸುವ ಜತೆಗೆ ಕನ್ನಡ ಕಡ್ಡಾಯಗೊಳಿಸಬೇಕು’ ಎಂದರು.
ಶಿಗ್ಗಾವಿ ತಾಲ್ಲೂಕು ಅಧ್ಯಕ್ಷ ಶೇಖಪ್ಪ ದೀಪಾವಳಿ, ಜಿಲ್ಲಾ ಕಾರ್ಯಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಜಿಲ್ಲಾ ಉಪಾಧ್ಯಕ್ಷ ಫಕ್ಕೀರೇಶ ಕಟ್ಟಿಮನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಕಟ್ಟೆಪ್ಪನವರ, ಮುಖಂಡರಾದ ಶಿವು ಕಮ್ಮಾರ, ಪ್ರೇಮಾ ನಾರಾಯಣಸ್ವಾಮಿ, ಸುಧಾ ಪಾಟೀಲ, ಗೌರಮ್ಮ ಬೆಲ್ಲದ, ಲತಾ ಕಳ್ಳಿಹಾಳ, ಹಾಲಮ್ಮ ಹಿರೇಗೌಡ್ರ, ಪಾರ್ವತಿ ಕುಂಬಾರಿ, ಸಾವಿತ್ರಿ ಹೊಸರಿತ್ತಿ, ನಿಲಾಂಬಿಕಾ ನಿಡಗುಂದಿ, ಗಿರಿಜಮ್ಮ ನಿಡಗುಂದಿ, ರೇಣುಕಾ ಮಾನೆಗಾರ, ಭಾಗ್ಯ ಭರಮಗೌಡ್ರ, ಶಾರದಾ ಮೆಗಳಮನಿ, ಶಶಿಕುಮಾರ ಚಕ್ರಸಾಲಿ, ಗಗನದೀಪ ಹಡಪದ, ಆಕಾಶ ವನಹಳ್ಳಿ, ಪ್ರಮೋದ ಹಡಪದ, ಜೈರಾಜ ಹಾದಿಮನಿ, ಮಣಿಕಂಠ ಕೊಠಬಾಗಿ ಇದ್ದರು.
ಇಂಗ್ಲೀಷ್ ಭಾಷೆ ಜಾಗತಿಕ ವ್ಯವಹಾರ ವೃತ್ತಿ ನಿರ್ವಹಣೆಗೆ ಅಗತ್ಯವಾಗಿದೆ. ಇತ್ತೀಚಿಗೆ ದೇಶದ ಹಲವಾರು ರಾಜ್ಯಗಳು ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ ಆಯಾ ರಾಜ್ಯಗಳ ಭಾಷೆ ಅನುಸಾರ ದ್ವಿಭಾಷಾ ನೀತಿ ಅನುಸರಿಸುತ್ತವೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿ ನಾಡಿನ ಪರವಾಗಿ ಸರ್ಕಾರ ಸ್ಪಷ್ಟ ನಿಲುವನ್ನು ತಾಳಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ರಾಜ್ಯದಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.