ಹಿರೇಕೆರೂರು: ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಕೆರೆಗಳು ಕೋಡಿಬಿದ್ದು, ಜಮೀನುಗಳು ಜಲಾವೃತಗೊಂಡಿವೆ.
ಹೊಲಬಿಕೊಂಡ ಗ್ರಾಮದ ಬುರುಲಕಟ್ಟೆ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಸೋಮವಾರ ರಾತ್ರಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು, 70ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಗ್ರಾಮಕ್ಕೆ ನುಗ್ಗಿದ ನೀರಿನಲ್ಲಿ ಗ್ರಾಮಸ್ಥರು ಬಲೆ ಹಾಕಿ ಮೀನು ಹಿಡಿದರು.
ಮಂಗಳವಾರ ಮಳೆ ಕಡಿಮೆ ಆಗಿದ್ದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಕೊಡಿ ಬಿದ್ದ ಕೆರೆಯ ನೀರು ಹೊರಬರದಂತೆ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.
ಗುಡ್ಡದಿಂದ ಹರಿದುಬಂದ ಮಳೆ ನೀರು ನೀಡನೇಗಿಲು ಗ್ರಾಮದೊಳಗೆ ನುಗ್ಗಿ ರಸ್ತೆಗಳು ಹಾಗೂ ಬೆಳೆಗಳಿಗೆ ಹಾನಿಯಾಗಿದೆ. ವರಹ ಗ್ರಾಮದ ದೊಡ್ಡ ಕೆರೆ ತುಂಬಿ ಹರಿದು ಹಿರೇಕೆರೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿ ಅಡಿಕೆ, ಮೆಕ್ಕೆಜೋಳದ ಜಮೀನುಗಳು ಜಲಾವೃತವಾಗಿವೆ. ಗುಡ್ಡದ ಮೇಲಿಂದ ನೀರು ಗ್ರಾಮದೊಳಗೆ ಹರಿದು ಮನೆಗಳಿಗೆ ನುಗ್ಗಿದೆ.
ತಾಲ್ಲೂಕಿನ ನೀಡನೆಗಿಲು, ಕೋಡ, ಕಚವಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಸಕ ಯ.ಬಿ.ಬಣಕಾರ ಭೇಟಿ ನೀಡಿ ಹಾನಿಯಾದ ಬಗ್ಗೆ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.