ಹಾವೇರಿ: ‘ಒಳ ಮೀಸಲಾತಿ ಜಾರಿಗೆ ಈ ಹಿಂದೆ ನಾನು ಮತ್ತು ಎಚ್.ಆಂಜನೇಯ ಅವರು ಸದನದಲ್ಲಿ ಚರ್ಚೆ ಮಾಡಿದ್ದೆವು. ಈ ಬಗ್ಗೆ ಮತ್ತೆ ಸದನದಲ್ಲಿ ಧ್ವನಿ ಎತ್ತುವೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಹೋಟೆಲ್ ಮಾಲಿಕರ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಒಳ ಮೀಸಲಾತಿಯ ಅಸ್ತ್ರ- ದಲಿತರ ಮುಂದಿನ ಸವಾಲುಗಳು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳ ಮೀಸಲಾತಿ ಜಾರಿಗೆ ತರಬೇಕೆನ್ನುವ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲೇಬೇಕು. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುವುದಾಗಿ ಶಾಸಕ ನೆಹರು ಓಲೇಕಾರ ಹೇಳಿದರು.
ಜಗಜೀವನರಾಮ್ ಭವನಕ್ಕೆ ನಿವೇಶನ: ಬಾಬು ಜಗಜೀವನರಾಮ್ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಹಾವೇರಿಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸಲು ಸಿದ್ಧನಿದ್ದೇನೆ. ದಲಿತ ಸಂಘಟನೆಗಳ ಮುಖಂಡರು ಒಗ್ಗಟ್ಟಾಗಿ ಬಂದರೆ ನಿವೇಶನದ ಖರೀದಿಗೆ ಸರ್ಕಾರದಿಂದ ಹಣಕಾಸಿನ ನೆರವು ಕೊಡಿಸುವುದರ ಜತೆ ಭವನ ನಿರ್ಮಾಣಕ್ಕೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಬೇರೆಯವರ ಚಿತಾವಣೆಗೆ ಈಡಾಗಬೇಡಿ. ಸಮಾಜ ಒಡೆಯುವ ಶಕ್ತಿಗಳ ಬಗ್ಗೆ ಜಾಗೃತರಾಗಿರಿ. ಹಿಂದುಳಿದ ವರ್ಗದವರಾದ ನಾವೆಲ್ಲರೂ ಒಗ್ಗಾಟ್ಟಾಗಿ ಹೋರಾಟ ಮಾಡೋಣ. ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ನೀವು ಸಬಲರಾಗಬಹುದು. ಇದರಿಂದ ಉದ್ದೇಶಿತ ಗುರಿಗಳನ್ನು ತಲುಪಬಹುದು ಎಂದು ಕಿವಿಮಾತು ಹೇಳಿದರು.
ವಿಧಾನಸೌಧಕ್ಕೆ ಮುತ್ತಿಗೆ: ದಸಂಸ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. 36 ದಲಿತ ಶಾಸಕರು ಇದ್ದರೂ, ಒಬ್ಬರೂ ಸದನದಲ್ಲಿ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ಡಿ.7ರಂದು ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಮಾಲತೇಶ ವೈ., ಮರೀಶ ನಾಗಣ್ಣನವರ, ಎಸ್.ಎನ್. ಬಳ್ಳಾರಿ, ಮಹದೇವಪ್ಪ ಎಫ್.ಕರೆಣ್ಣನವರ್,ಎಸ್.ಎನ್.ಮಲ್ಲಪ್ಪ, ಸೂಲಕುಂಟೆ ಪಮೇಶ, ವಿಜಯ ನರಸಿಂಹ, ಎಚ್.ಆಂಜನೇಯ, ಎಸ್.ಜಿ.ಹೊನ್ನಪ್ಪನವರ, ಗಣೇಶ ಪೂಜಾರ, ಫಕ್ಕೀರಪ್ಪ, ಸಂಜೀವಗಾಂಧಿ ಸಂಜೀವಣ್ಣನವರ, ಬಾಬಕ್ಕ ಬಳ್ಳಾರಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.