
ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಮೂಲದ ಸದ್ಯ ಬೆಂಗಳೂರಿನಲ್ಲಿರುವ ಡಾ. ಎಸ್.ವಿ. ಹಿತ್ತಲಮನಿ ಅವರಿಗೆ 2025ನೇ ಸಾಲಿನ ಕೃಷಿ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನಿವೃತ್ತ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕರೂ ಆಗಿರವು ಎಸ್.ವಿ. ಹಿತ್ತಲಮನಿ ಅವರ ಕೃಷಿ ಕ್ಷೇತ್ರದ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಈ ಪ್ರಶಸ್ತಿ ಘೋಷಿಸಿದೆ.
1953ರಲ್ಲಿ ಜನಿಸಿದ್ದ ಹಿತ್ತಲಮನಿ ಅವರು 1973ರಲ್ಲಿ ಬಿಎಸ್ಸಿ (ಕೃಷಿ) ಪದವಿ ಪಡೆದಿದ್ದಾರೆ. 1976ರಲ್ಲಿ ಎಂ.ಎಸ್ಸಿ. ಹಾಗೂ 1986ರಲ್ಲಿ ಪಿ.ಎಚ್ಡಿ ಪದವಿ ಪಡೆದಿದ್ದಾರೆ.
1976ರಲ್ಲಿ ತೋಟಗಾರಿಕೆ ಇಲಾಖೆ ಸೇವೆಗೆ ಸೇರಿದ್ದ ಹಿತ್ತಲಮನಿ ಅವರು ಹಿರಿಯ ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ಜಂಟಿ ನಿರ್ದೇಶಕ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2013ರಲ್ಲಿ ನಿವೃತ್ತರಾಗಿರುವ ಇವರು, ಇಂದಿಗೂ ರೈತರಿಗೆ ಕೃಷಿ ಸಲಹೆಗಳನ್ನು ನೀಡುತ್ತಿದ್ದಾರೆ.
ನಿವೃತ್ತಿ ಬಳಿಕವೂ 12 ವರ್ಷಗಳಿಂದ ಆಧುನಿಕ ತಂತ್ರಜ್ಞಾನದ ಸಹಾಯದಿಂದ ತೋಟಗಾರಿಕೆ ಕೃಷಿ ಮಾಡುವುದು ಹೇಗೆ ? ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಜ್ಯದ ರೈತರಿಗೆ ಸಲಹೆ ನೀಡುತ್ತಿದ್ದಾರೆ. ಕಡಿಮೆ ಮಳೆ ಇರುವ ಪ್ರದೇಶದಲ್ಲಿ ಯಾವ ಬೆಳೆ ಸೂಕ್ತ ಎಂಬ ಬಗ್ಗೆ ಸಂಶೋಧನೆ, ಅಧ್ಯಯನ ಮಾಡುತ್ತಿದ್ದಾರೆ.
ನೇರಳೆ, ಚಕೋತ, ಪಪ್ಪಾಯಿ, ಮಾವು, ಹಲಸು ಸೇರಿದಂತೆ ಇತತೆ ಹಣ್ಣುಗಳ ಹೊಸ ತಳಿಗಳ ಸಂಶೋಧನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿಯಲ್ಲಿ ಸಂರಕ್ಷಣಾ ತಂತ್ರಗಳ ಅಳವಡಿಕೆ, ಸಾವಯವ ಕೃಷಿ, ತಂತ್ರಜ್ಞಾನ ಬಳಕೆ, ಇತರ ಅಂಶಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.