ರಾಣೆಬೆನ್ನೂರು: ತಾಲ್ಲೂಕಿನಾದ್ಯಂ ಸತತ ಮಳೆಯಿಂದಾಗಿ ಇಲ್ಲಿಯವರೆಗೆ ಒಟ್ಟು 53 ಮನೆಗಳು ಭಾಗಶಃ ಕುಸಿದು ಬಿದ್ದಿವೆ.
‘ತುಂಗಭದ್ರಾ ಮತ್ತು ಕುಮಧ್ವತಿ ನದಿ ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ನದಿ ಪಾತ್ರದ ಜನರಿಗೆ ಎತ್ತರದ ಸ್ಥಳಕ್ಕೆ ಹೋಗಲು ಮತ್ತು ಜಾನುವಾರುಗಳನ್ನು ಬಿಡಬಾರದು ಎಂದು ಸೂಚಿಸಲಾಗಿದೆ. ತಾಲ್ಲೂಕಿನಲ್ಲಿ ಯಾವುದೇ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ’ ಎಂದು ತಹಶೀಲ್ದಾರ್ ಗುರುಬಸವಾಜ ತಿಳಿಸಿದರು.
ತಾಲ್ಲೂಕಿನ ಕಜ್ಜರಿ ಗ್ರಾಮದ ಹನುಮಂತಪ್ಪ ನೇಮಪ್ಪ ಲಮಾಣಿ ಎಂಬುವವರ ನೆಲ ಮಹಡಿಯ ಗೋಡೆ ಏಕಾಏಕಿ ಗುರುವಾರ ಕುಸಿದು ಬಿದ್ದಿದೆ. ಗೋಡೆ ಕುಸಿತದಿಂದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಡುಗೆ ಮನೆಯಲ್ಲಿನ ಪಾತ್ರೆಗಳು ನಜ್ಜುಗುಜ್ಜಾಗಿವೆ.
ಗೋಡೆ ಬಿದ್ದ ಶಬ್ದ ಕೇಳಿದ ಕೂಡಲೇ ಸುತ್ತಮುತ್ತಲಿನ ಜನ ಬಂದು ಅಂಗವಿಕಲ ಹನುಮಂತಪ್ಪ ಲಮಾಣಿ ಹಾಗೂ ಕುಟುಂಬದವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪಕ್ಕದ ಮನೆಯವರು ಹನುಮಂತಪ್ಪ ಕುಟುಂಬದ ವಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
‘ನಾನು ಅಂಗವಿಕಲನಾಗಿದ್ದು ಸರ್ಕಾರದಿಂದ ಬರುವ ಮಾಶಾಸನ ಮತ್ತು ಪತ್ನಿಯ ಕೂಲಿ ಕೆಲದಿಂದ ಬಂದ ಹಣದಿಂದ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇವೆ. ಸರ್ಕಾರ ಕೂಡಲೇ ಆರ್ಥಿಕ ನೆರವು ನೀಡಿ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಬೇಕು’ ಎಂದು ಹನುಮಂತಪ್ಪ ನೇಮಪ್ಪ ಲಮಾಣಿ ಒತ್ತಾಯಿಸಿದ್ದಾರೆ.
‘ತುಂಗಭದ್ರಾ ಮತ್ತು ಕುಮಧ್ವತಿ ನದಿ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ಗ್ರಾಮಗಳ ಸಮೀಪದ ಹೊಲಗಳಿಗೆ ನೀರು ನುಗ್ಗಿದೆ. ಬೆಳೆ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ’ ಎಂದು ಕೃಷಿ ಸಹಾಯಕ ನಿರ್ದೇಶಕಿ ಶಾಂತಮಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.