ಹಾವೇರಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸೇರಿದ ಬೆಂಗಳೂರಿನ ಭೂಮಿಯಲ್ಲಿ ಹೈದರಾಬಾದ್ ಎಜುಕೇಷನ್ ಸೊಸೈಟಿಗೆ 1 ಎಕರೆ 24 ಗುಂಟೆ ಜಾಗ ನೀಡಿರುವುದನ್ನು ರದ್ದುಪಡಿಸಲು ಒತ್ತಾಯಿಸಿ ಹಾವೇರಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ 5 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಈ ಭೂಮಿಯನ್ನು ಬೌದ್ಧ ಧರ್ಮದ ಶಿಕ್ಷಣ ಮತ್ತು ಅಧ್ಯಯನಕ್ಕಾಗಿ ನೀಡಲಾಗಿತ್ತು. ಸದರಿ ನಿವೇಶನವು ರಾಜಮಹಲ್ ವಿಲಾಸ ಬಡಾವಣೆಯ ಸರ್ವೆ ನಂ.2ರಲ್ಲಿ ಬರುತ್ತದೆ.
ಅಂದಿನ ಸಿ.ಪಿ.ಟಿ.ಬಿ.ಯು (ಇಂದಿನ ಬಿ.ಡಿ.ಎ) ಈ ಪೈಕಿ ಸುಮಾರು 1.17 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಿತ್ತು. ಈ ಭೂಮಿ ವಿವಾದ ಇತ್ಯರ್ಥವಾಗುವವರೆಗೆ ಅಂಬೇಡ್ಕರ್ ಅವರಿಗೆ ಸೇರಿದ ಭೂಮಿ ಹಸ್ತಾಂತರ ಸಲ್ಲದು. 1.17 ಎಕರೆ ಭೂಮಿಯನ್ನು ಪೀಪಲ್ಸ್ ಎಜುಕೇಷನ್ ಸೊಸೈಟಿ ಮರು ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಎನ್. ಗಾಳೆಮ್ಮನವರ, ಪ್ರಮುಖರಾದ ಧರ್ಮಣ್ಣ ಕಿವುಡನವರ, ಸುಶೀಲಾ ಕೋಮನಾಳ, ಗಿರಿಜಮ್ಮ ಅಂಚಿ, ಮಂಜುನಾಥ ಹಸವಿ, ಮಾಲತೇಶ ಕಿವಡನವರ, ಸಿದ್ದಪ್ಪ ತಳವಾರ, ಮಾಲತೇಶ ಓಲೇಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.