ಹಾವೇರಿ: ‘ತಾಲ್ಲೂಕು ಮೆಕ್ಕೆಜೋಳ ಕಣಜವಾಗಿದ್ದು, ಮಳೆ ಆಶ್ರಿತ ಮತ್ತು ನೀರಾವರಿಯಿಂದ ಸುಮಾರು 35 ಲಕ್ಷ ಹೆಕ್ಟೇರ್ ಪ್ರದೇಶ ಮೆಕ್ಕೆಜೋಳ ಬಿತ್ತನೆಯಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು ಎಂದು ಜೆಡಿಎಸ್ ಹಾವೇರಿ ವಿಧಾನಸಭಾ ರೈತ ಘಟಕದ ವತಿಯಿಂದ ಒತ್ತಾಯಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೆಕ್ಕೆಜೋಳವನ್ನು ₹1800 ರಿಂದ ₹1860 ರವರೆಗೆ ಖರೀದಿ ಮಾಡಬೇಕೆಂದು ಸೂಚಿಸಿವೆ. ಆದರೆ, ಮಾರುಕಟ್ಟೆಯಲ್ಲಿ ₹1000 ರಿಂದ ₹1200 ರವರೆಗೆ ಖರೀದಿ ಆಗುತ್ತಿದ್ದು ರೈತರಿಗೆ ಪ್ರತಿ ಕ್ವಿಂಟಲ್ಗೆ ₹800ರಷ್ಟು ರೈತರಿಗೆ ನಷ್ಟವಾಗುತ್ತಿದೆ. ರೈತರಿಗೆ ಸಿಗಬೇಕಾದ ಲಾಭ ದಲ್ಲಾಳಿಗೆ ಸಿಗುತ್ತಿದೆ. ಈಗಾಗಲೇ ಅಕಾಲಿಕ ಮಳೆಯಿಂದ ಬೆಳೆದ ಮೆಕ್ಕೆಜೋಳವನ್ನು ಸಂರಕ್ಷಣೆ ಮಾಡಿಕೊಳ್ಳಲು ಆಗದೇ ರೈತರು ಕಂಗೆಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು 8 ದಿನದೊಳಗಾಗಿ ಖರೀದಿ ಕೇಂದ್ರವನ್ನು ಆರಂಭಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ಮಲ್ಲಿಕಾರ್ಜುನ ಅರಳಿ, ಮಾಂತೇಶ ಬೇವಿನಹಿಂಡಿ,ಎಸ್.ಎಸ್.ಕಳ್ಳಿಮನಿ, ಅಣ್ಣಯ್ಯ ಚವಡಿ, ಕೆ.ಎಂ. ಸುಂಕದ, ಮಾಂತೇಶ ಬೇವಿನಹಿಂಡಿ, ಸುನೀಲ ದಂಡೆಮ್ಮನವರ, ಸೈಯದ್ ಜಮಾದಾರ, ಅಮೀರಜಾನ ಬೇಪಾರಿ, ಪ್ರಭುಸ್ವಾಮಿ ಕುಲಕರ್ಣಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.