ADVERTISEMENT

ಸೂಳೆಕೆರೆ ಗುಡ್ಡದ ಬಳಿ ರಸ್ತೆ ವಿಸ್ತರಣೆ ಕಾಮಗಾರಿ- ಸ್ಫೋಟಕ ಬಳಕೆಗೆ ಜನರ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 3:41 IST
Last Updated 20 ಜೂನ್ 2021, 3:41 IST
ಸಂತೇಬೆನ್ನೂರು ಸಮೀಪದ ಸೂಳೆಕೆರೆ ಗುಡ್ಡದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಿಮಿತ್ತ ನಡೆಸಿದ ಸ್ಫೋಟದ ದೃಶ್ಯ.
ಸಂತೇಬೆನ್ನೂರು ಸಮೀಪದ ಸೂಳೆಕೆರೆ ಗುಡ್ಡದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಿಮಿತ್ತ ನಡೆಸಿದ ಸ್ಫೋಟದ ದೃಶ್ಯ.   

ಸಂತೇಬೆನ್ನೂರು: ಸಮೀಪದ ಸೂಳೆಕೆರೆ ಬಳಿ ಹಾದು ಹೋಗಿರುವ ಕುಮಟಾ– ಕಡಮಡಗಿ ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ಗುಡ್ಡದ ಅಂಚಿನಲ್ಲಿ ಸ್ಫೋಟಕಗಳನ್ನು ಬಳಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸ್ಫೋಟದಿಂದ ದಟ್ಟವಾದ ದೂಳು ಆವರಿಸಿದಹಾಗೂಸಿಡಿದ ಕಲ್ಲುಗಳು ಕೆರೆಯೊಳಗೆಬಿದ್ದು ನೀರುಚಿಮ್ಮುವ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನಾಗರಿಕರಲ್ಲಿ ತಲ್ಲಣ ಉಂಟುಮಾಡಿದೆ.

‘ಸ್ಫೋಟಕ ಬಳಸಲು ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆಯಲಾಗಿದೆ ಎಂದು ಕಾಮಗಾರಿ ನಡೆಸುತ್ತಿರುವವರು ಹೇಳಿದ್ದಾರೆ. ನಿಯಂತ್ರಿತ ಸ್ಫೋಟಕ ಬಳಕೆಗೆ ಎನ್‌ಒಸಿ ನೀಡಿದ್ದರೂ ನಿಯಮಗಳನ್ನು ಮೀರಿ ಹೆಚ್ಚುವರಿ ಸ್ಫೋಟಕ ಬಳಸಲಾಗಿದೆ. ಇದರಿಂದ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ. ಕೆರೆಯಲ್ಲಿ ಹೂಳು ಹೆಚ್ಚುವ ಭೀತಿ ಇದೆ. ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆ ಅನುಮತಿ ನೀಡಿಲ್ಲ’ ಎಂದು ಖಡ್ಗ ಸಂಘದ ರಘು ದೂರಿದ್ದಾರೆ.

ADVERTISEMENT

‘ಗಡಸು ಕಲ್ಲಿನ ಪದರ ಸಾಮಾನ್ಯ ಯಂತ್ರಗಳಿಂದ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಅವರ ಅನುಮತಿಯೊಂದಿಗೆ ಒಂದೆರಡು ಬಾರಿ ಸಣ್ಣ ಪ್ರಮಾಣದ ಸ್ಫೋಟ ನಡೆಸಲಾಗಿದೆ. ಭೂ ಪದರದ ಮೇಲ್ಭಾಗದಲ್ಲಿ ಸ್ಫೋಟಿಸಿರುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಲಾಕ್‌ಡೌನ್‌ ಕಾರಣ ವಾಹನಗಳ ಸಂಚಾರ ಇಲ್ಲದಿರುವುದರಿಂದ ಸ್ಫೋಟ ನಡೆಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ಕುಮಾರ್ ಸ್ಪಷ್ಟಪಡಿಸಿದ್ದಾರೆ.

‘ಸೂಳೆಕೆರೆ ಗುಡ್ಡಕ್ಕೆ ಹೊಂದಿಕೊಂಡ ರಾಜ್ಯ ಹೆದ್ದಾರಿ ಕಿರಿದಾಗಿತ್ತು. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ. ಒಂದೊಮ್ಮೆ ನಾನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ ಕೆರೆಗೆ ಬಿದ್ದು 12 ಜನ ಪ್ರಾಣ ಕಳೆದುಕೊಂಡಿದ್ದರು. ಸರ್ಕಾರ ರಸ್ತೆ ಅಗಲೀಕರಣ ಯಾವಾಗ ನಡೆಸುತ್ತದೊ ಎಂಬ ದುಗುಡದಲ್ಲಿದ್ದೆ. ಈಗ 240 ಅಡಿ ಅಗಲದ ರಸ್ತೆ ನಿರ್ಮಾಣವಾಗುತ್ತಿದೆ. ಅಪಘಾತ ತಪ್ಪಿಸಿ ಅಮಾಯಕ ಜೀವಗಳ ರಕ್ಷಣೆಗೆ ನಡೆಸುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಅಭಿನಂದನೀಯ’ ಎಂದು ಚನ್ನಗಿರಿ ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಶನಿವಾರ ಪತ್ರಿಕೆಗೆ ಲಿಖಿತ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.