
ಹಾವೇರಿ: ‘ರೋಮ್ಯಾಂಟಿಕ್ ಹಾಗೂ ಥ್ರಿಲ್ಲರ್ ವಿಷಯ ಇಟ್ಟುಕೊಂಡು ನಿರ್ಮಿಸಿರುವ ಕಲ್ಟ್ ಸಿನಿಮಾವು ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ’ ಎಂದು ಸಿನಿಮಾ ನಟ ಝೈದ್ ಖಾನ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾವೇರಿ ಸೇರಿದಂತೆ ರಾಜ್ಯದಾದ್ಯಂತ ಸಿನಿಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಪ್ರಯತ್ನಿಸುತ್ತಿದ್ದೇವೆ. ಬಿಡುಗಡೆ ಸಮಯದಲ್ಲಿ ಎಷ್ಟು ಸಿನಿಮಂದಿರ ಸಿಗುತ್ತದೆಯೋ ಅಲ್ಲೆಲ್ಲ ಸಿನಿಮಾ ಬಿಡುಗಡೆ ಮಡಲಾಗುವುದು’ ಎಂದರು.
‘ಸಿನಿಮಾ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಸಂಚರಿಸುತ್ತಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗುವಂಥ ಹಾಗೂ ಸಮಾಜಕ್ಕೆ ಸಂದೇಶ ನೀಡುವ ವಿಷಯ ಇಟ್ಟುಕೊಂಡು ಸಿನಿಮಾ ನಿರ್ಮಿಸಲಾಗಿದೆ’ ಎಂದರು.
‘ಕೆ.ವಿ.ಎನ್. ಪ್ರೊಡಕ್ಷನ್ಸ್, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಕಲ್ಟ್’ ಸಿನಿಮಾದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದ್ದು. ಜೆ.ಎಸ್.ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ’ ಎಂದು ತಿಳಿಸಿದರು.
‘ನಟ ದರ್ಶನ್ ಅವರಿಗೆ ಜನವರಿಯಲ್ಲಿ ಜಾಮೀನು ಸಿಗುವ ವಿಶ್ವಾಸವಿದೆ. ಅವರ ಜೊತೆಗೆಯೂ ಸಿನಿಮಾ ಬಗ್ಗೆ ಚರ್ಚಿಸಿದ್ದೇನೆ. ಜಾಮೀನು ಸಿಕ್ಕ ಕೂಡಲೇ ಭೇಟಿಯಾಗುತ್ತೇನೆ. ಜಾಮೀನು ಸಿಗದಿದ್ದರೂ ಜೈಲಿಗೆ ಹೋಗಿ ಭೇಟಿ ಮಾಡಿಕೊಂಡು ಬರುತ್ತೇನೆ’ ಎಂದರು.
‘ಬನಾರಸ್ ಸಿನಿಮಾ ಸಂದರ್ಭದಲ್ಲಿ ಕೆಲ ವಿವಾದಗಳು ಉಂಟಾಗಿದ್ದವು. ಕೆಲವರು, ಸಿನಿಮಾ ಬಹಿಷ್ಕಾರ ಮಾಡಿದರು. ಆದರೆ, ಈಗ ಜನರು ಮೆಚ್ಚುವ ಸಿನಿಮಾ ಮಾಡಿದ್ದೇವೆ. ತಂದೆಗೆ ಸಿನಿಮಾ ಎಂದರೆ ಅಷ್ಟಕ್ಕಷ್ಟೆ. ನನಗೂ ರಾಜಕೀಯಕ್ಕೆ ಹೋಗುವ ವಿಚಾರವಿಲ್ಲ. ಇತ್ತೀಚಿನ ದಿನಗಳಲ್ಲಿ ಪೈರಸಿ ಹಾವಳಿ ಹೆಚ್ಚಾಗಿದೆ. ಅದರ ವಿರುದ್ಧ ಕಾನೂನು ಮಾಡಿದರೆ ಸಂತೋಷ. ಪೈರಸಿ ಮಾಡುವವರು ನಮ್ಮ ಕೈಗೆ ಸಿಕ್ಕರಂತೂ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ನಟಿ ಮಲೈಕಾ ವಾಸುಪಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಕಾಲೇಜಿನಲ್ಲಿ ಪ್ರಚಾರ: ಹಳೇ ಪಿ.ಬಿ.ರಸ್ತೆಯಲ್ಲಿರುವ ಜಿ.ಎಚ್. ಕಾಲೇಜಿನಲ್ಲಿ ಸಿನಿಮಾ ಪ್ರಚಾರ ನಡೆಯಿತು. ವೇದಿಕೆ ಏರಿದ ನಟ, ನಟಿ ಹಾಗೂ ಸಿನಿಮಾ ತಂಡ, ವಿದ್ಯಾರ್ಥಿಗಳನ್ನು ರಂಜಿಸಿದರು. ಸಿನಿಮಾ ವೀಕ್ಷಿಸುವಂತೆ ಕೋರಿದರು.
‘ವಿವಿಐಪಿ ಸೌಲಭ್ಯ ದುರುಪಯೋಗ’
‘ಸರ್ಕಾರದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು (ವಿವಿಐಪಿ) ಉಳಿದುಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಆದರೆ ಇದೇ ಸ್ಥಳದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಸಿನಿಮಾ ಪ್ರಚಾರದ ಪತ್ರಿಕಾಗೋಷ್ಠಿಗೆ ಅವಕಾಶ ಮಾಡಿಕೊಟ್ಟು ಲೋಕೋಪಯೋಗಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಬಿಜೆಪಿ ಮುಖಂಡ ಗವಿಸಿದ್ಧಪ್ಪ ದ್ಯಾಮಣ್ಣನವರ ದೂರಿದ್ದಾರೆ. ‘ತಂದೆ ಸಚಿವ ಎಂಬ ಕಾರಣಕ್ಕೆ ಮಗನಿಗೆ ವಿವಿಐಪಿ ಕೊಠಡಿ ನೀಡುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಕೇವಲ ಸಚಿವರ ಮಗನ ಸಿನಿಮಾಕ್ಕೆ ಮಾತ್ರ ಕೊಠಡಿ ನೀಡಿದರೆ ಉಳಿದ ನಟರಿಗೆ ಅವಕಾಶ ನೀಡಬೇಕಾಗುತ್ತದೆ. ವಿವಿಐಪಿ ಸ್ಥಳದಲ್ಲಿ ಸಿನಿಮಾ ಪ್ರಚಾರಕ್ಕೆ ಯಾರು ಅವಕಾಶ ಕೊಟ್ಟವರು? ಹಾಗೂ ಅದಕ್ಕೆ ಸಹಕರಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.