ಸವಣೂರು: ಮಾರಕಾಸ್ತ್ರಗಳಿಂದ ರೌಡಿಶೀಟರ್ ಅನ್ವರ ಶೇಖ ಅಲಿಯಾಸ್ ಟೈಗರ್ ಅನ್ವರ (40)ನನ್ನು ಬರ್ಬರ ಹತ್ಯೆ ಮಾಡಿರುವ ಪ್ರಕರಣ ಭಾನುವಾರ ಸವಣೂರ ಪಟ್ಟಣದ ಕಾರಡಗಿ ರಸ್ತೆಯಲ್ಲಿ ನಡೆದಿದೆ.
ಅನ್ವರ ಶೇಖ ಮೂಲತಃ ಸವಣೂರ ತಾಲ್ಲೂಕಿನ ಕಾರಡಗಿ ಗ್ರಾಮದ ನಿವಾಸಿಯಾಗಿದ್ದು, ಗೋವಾದಲ್ಲಿ ವಾಸವಾಗಿದ್ದ. ಗೋವಾದಲ್ಲಿ ಅವನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿಯೇ ರೌಡಿ ಪಟ್ಟಿಯಲ್ಲಿ ಅವನ ಹೆಸರು ಸೇರ್ಪಡೆಯಾಗಿತ್ತು. ಆಗಾಗ ಸ್ವ ಗ್ರಾಮಕ್ಕೆ ಬಂದು ಹಪ್ತಾ ವಸೂಲಿ ಮಾಡುತ್ತಿದ್ದ. ಸವಣೂರ ಪಟ್ಟಣದ ವಿ.ಕೃ. ಗೋಕಾಕ ವೃತ್ತದಲ್ಲಿರುವ ಇಮ್ರಾನ್ ಚೌಧರಿ ಗ್ಯಾರೇಜ್ ನುಗ್ಗಿ ಹಣ ಕಳವು ಮಾಡಿದ್ದ. ಗ್ಯಾರೇಜ್ ಮಾಲೀಕ ಇಮ್ರಾನ್ ಚೌಧರಿ ಅವನಿಗೆ ಕಾಯುತ್ತಿದ್ದ.
ರೌಡಿ ಅನ್ವರ ಶೇಖ್ ಭಾನುವಾರ ಸಂಜೆ 6 ಸುಮಾರಿಗೆ ಸ್ವಗ್ರಾಮಕ್ಕೆ ಹೋಗುವ ವೇಳೆ ಚೌಧರಿ ಕಾರಡಗಿ ರಸ್ತೆಯಲ್ಲಿ ವಾಹನ ತಡೆದು ಹಣ ಕೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ರೌಡಿ ಅನ್ವರ ವಾಹನದಲ್ಲಿದ್ದ ಮಾರಕಾಸ್ತ್ರ ತೆಗೆದುಕೊಂಡು ಬಂದಾಗ, ಚೌಧರಿ ಅದೇ ಮಾರಕಾಸ್ತ್ರದಿಂದ ಅನ್ವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಆರೋಪಿ ಇಮ್ರಾನ್ ಚೌಧರಿ ಸವಣೂರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.