
ಶಿಗ್ಗಾವಿ: ‘ಫೆ.14ರಂದು ಜರುಗುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳುವ ಜತೆಗೆ ಸಮಾವೇಶದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ನಡೆಯಬೇಕು’ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶಿಗ್ಗಾವಿ-ಸವಣೂರ ತಾಲ್ಲೂಕಿನಲ್ಲಿ ಸುಮಾರು 20 ಸಾವಿರ ಜನರಿಗೆ ಮನೆ ಪಟ್ಟಾ ನೀಡಲಾಗುತ್ತಿದೆ. ಮನೆ ಪಟ್ಟಾ ಇಲ್ಲದೆ ಪರದಾಡುತ್ತಿರುವ ಬಡಜನರನ್ನು ಗುರುತಿಸಿ ಮನೆ ಪಟ್ಟಾ ನೀಡುವ ಮಹತ್ವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ’ ಎಂದರು.
ಸಮಾವೇಶದಲ್ಲಿ ಈಗಾಗಲೇ ಸಿದ್ದವಾಗಿರುವ 6 ಸಾವಿರ ಮನೆ ಪಟ್ಟಾ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇನ್ನೂಳಿದ 14 ಸಾವಿರ ಪಟ್ಟಾವನ್ನು ಸಧ್ಯದಲ್ಲಿ ವಿತರಿಸಲಾಗುವುದು. ಗ್ಯಾರಂಟಿ ಯೋಜನೆಯಡಿ ಕ್ಷೇತ್ರದಲ್ಲಿ ಸುಮಾರು ₹800 ಕೋಟಿ ಅನುದಾನ ನೀಡಲಾಗಿದೆ. ಈ ಯೋಜನೆಯಿಂದ ಗ್ರಾಮೀಣ ಬಡಕುಟುಂಬದ ಜನರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ’ ಎಂದರು.
ಸಮಾವೇಶಕ್ಕೆ ಬರುವ ಜನರಿಗೆ ಸಂಚಾರ ವ್ಯವಸ್ಥೆ, ಊಟ, ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಉಪವಿಭಾಗಾಧಿಕಾರಿ ಶುಭಂ ಶುಕ್ಲಾಂ, ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಸವಣೂರ ತಹಶೀಲ್ದಾರ್ ರವಿ ಕೊರವರ, ತಾ.ಪಂ ಇಒ ಮಂಜುನಾಥ ಸಾಳೊಂಕಿ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ತಾಲ್ಲೂಕು ಅಧ್ಯಕ್ಷ ಗುಡ್ಡಪ್ಪ ಜಲದಿ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್, ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ, ಮಲ್ಲಮ್ಮ ಸೋಮನಕಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪಟ್ಟಾ ವಿತರಣೆ: ಲಂಚದ ಆರೋಪ ತಾಲ್ಲೂಕಿನ ಹುನಗುಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ₹15 ಸಾವಿರ ಲಂಚ ತೆಗೆದುಕೊಂಡು ಮನೆ ಪಟ್ಟಾ ವಿತರಿಸುತ್ತಿದ್ದಾರೆ ಎಂದು ಪೂರ್ವಭಾವಿ ಸಭೆಯಲ್ಲಿ ಹುನಗುಂದ ಗ್ರಾಮಸ್ಥರು ಆರೋಪಿಸಿದರು. ಶಾಸಕರು ಹುನಗುಂದ ಗ್ರಾ.ಪಂ ಪಿಡಿಒ ನೃಪತುಂಗ ಭೂಸರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡು ಬಡಕುಟುಂಬಗಳಿಗೆ ನೆರವಾಗಬೇಕು. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.