ತಿಳವಳ್ಳಿ: ಕ್ರೀಡೆಗಳು ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗಿವೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕುರುಬರ ಹೇಳಿದರು.
ಇಲ್ಲಿಯ ಶಾಂತೇಶ್ವರ ಪ್ರೌಢಶಾಲಾ ಆವರಣದಲ್ಲಿ ಆರ್ಯನ್ ಸೆಂಟ್ರಲ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಪ್ರೌಢ ಶಾಲೆಗಳ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಜೀವನದ ಒಂದು ಪ್ರಮುಖ ಭಾಗವಾಗಿದೆ. ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವಾಗಿದೆ ಹಾಗೂ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಆರ್ಯನ್ ಸೆಂಟ್ರಲ್ ಶಾಲೆಯ ಅಧ್ಯಕ್ಷ ಮಹಾಂತೇಶ ಕೋಟಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತರುವ ಕೆಲಸವನ್ನು ಶಿಕ್ಷಕರು ಮಾಡಿದರೆ ಸಾಕು ಮಕ್ಕಳು ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ ಎಂದರು.
ತಾಲ್ಲೂಕು ಶಿಕ್ಷಣ ಸುಧಾರಣ ಸಮಿತಿ ಸದಸ್ಯ ಬಸವರಾಜ ಚೌವಾಣ, ನಮಿತಾ ಕೋಟಿ, ಹನುಮಂತಪ್ಪ ಕಲ್ಲೇರ, ಶಿವಯೋಗಿ.ಎಮ್.ಡಿ, ಸೋಮನಾಥ ಬಾಬರ, ಮಂಜುನಾಥ ಹೆಗಡೆ, ನಿರಂಜನ ಬಿಳಕಿ, ಸಂತೋಷ ಪಾರ್ಥನಳ್ಳಿ, ಬಸವರಾಜ ಪಾಟೀಲ, ಸತೀಶ ಎಮ್ಮೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.