ಹಾವೇರಿ: ‘ಶರಣ ಸಾಹಿತ್ಯ ಸೇವೆಗೆ ಸಂದ ಗೌರವ ಇದಾಗಿದ್ದು, ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಗೆ ಗೌರವಗಳು ಅರಸಿಕೊಂಡು ಬರುತ್ತವೆ’ ಎಂದು ಶಕುಂತಲಾ ಜಯದೇವ ಶರಣ ಪ್ರಶಸ್ತಿ ಪುರಸ್ಕೃತರಾದ ಶರಣೆ ಬಸಮ್ಮ ಹಳಕೊಪ್ಪ ನುಡಿದರು.
ನಗರದ ತಮ್ಮ ನಿವಾಸದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಾವೇರಿ ಶರಣರ ನಾಡು. ಇಲ್ಲಿ ನಿರಂತರವಾಗಿ ಶರಣರ ಸಂದೇಶಗಳು ಜನಮನಕ್ಕೆ ಕೇಳುತ್ತಲೇ ಇರುತ್ತವೆ. ಇಂಥ ಕೆಲಸದಲ್ಲಿ ಶರಣ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಸೇವೆ ಮಾಡುತ್ತಿದೆ. ನನಗೆ ಸಂದ ಗೌರವ ಇಡೀ ಕ್ರಿಯಾಶೀಲ ಶರಣ ಬಳಗಕ್ಕೆ ಸಂದ ಗೌರವ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ‘ಯಾವುದೇ ಶಿಫಾರಸ್ಸುಗಳಿಲ್ಲದೆ ತಾಯಿ ಬಸಮ್ಮ ಹಳಕೊಪ್ಪ ಅವರಿಗೆ ಪ್ರಶಸ್ತಿ ಬಂದಿದೆ. ಮಾರ್ಚ್ನಲ್ಲಿ ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸಮಾಜಕ್ಕಾಗಿ ಪೂರ್ಣ ಪ್ರಮಾಣದ ಸೇವೆ ಸಲ್ಲಿಸಿದ ಬಸಮ್ಮ ಅವರು ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.
ಶ.ಸಾ.ಪ ನಗರ ಗೌರವಾಧ್ಯಕ್ಷ ಸಿ.ಎಸ್. ಮರಳಿಹಳ್ಳಿ ಆಶಯ ನುಡಿ ನುಡಿದರು. ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಲಲಿತಕ್ಕ ಹೊರಡಿ, ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ, ಎಂ.ಎಸ್.ಕೆಂಚನಗೌಡರ, ಮುಖ್ಯಶಿಕ್ಷಕ ಬಸವರಾಜ ಕೋರಿ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಇ.ಸಿ. ಅಗಸಿಬಾಗಿಲ, ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಶಿವಯೋಗಿ ಬೆನ್ನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.