ಹಾವೇರಿ: ನಗರದ ವಿದ್ಯಾನಗರ ಪಶ್ಚಿಮ ಬಡಾವಣೆಯ ನಿವಾಸಿ 80 ವರ್ಷದ ಪದ್ಮಾವತಿಬಾಯಿ ನಾಡಿಗೇರ ಅವರು ಹೊಲಿಗೆ ಯಂತ್ರದ ಮೂಲಕ ಮಾಸ್ಕ್ (ಮುಖಗವಸು) ತಯಾರಿಸಿ, ಬಡವರಿಗೆ ಉಚಿತವಾಗಿ ವಿತರಿಸುವ ಸೇವೆ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಮಾಸ್ಕ್ ತೀವ್ರ ಅಭಾವ ಇದ್ದ ಕಾರಣ,ಅಗಡಿ ಆನಂದವನಮಠದ ಗುರುದತ್ತ ಸ್ವಾಮೀಜಿ ಅವರು ಮಾಸ್ಕ್ ತಯಾರಿಸಿಕೊಡಲು ಕೋರಿದ್ದರು. ಹೀಗಾಗಿನಿತ್ಯ 35ರಂತೆ ಒಟ್ಟು 300 ಮಾಸ್ಕ್ಗಳನ್ನು ಪದ್ಮಾವತಿಬಾಯಿ ಉಚಿತವಾಗಿ ಹೊಲಿದು ಕೊಟ್ಟಿದ್ದಾರೆ. ಈ ಮಾಸ್ಕ್ಗಳನ್ನು ಬಡವರಿಗೆ ಮತ್ತು ಮಠದಲ್ಲಿ ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.
‘ಮಾರ್ಚ್ 27ರಿಂದ ಮಾಸ್ಕ್ ತಯಾರಿಸುತ್ತಿದ್ದು, ಕಾರ್ಮಿಕರಿಗೆ, ನಿರ್ಗತಿಕರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಲಾಕ್ಡೌನ್ ಮುಗಿಯುವವರೆಗೂ ಈ ಸೇವೆ ನಿರಂತರವಾಗಿ ಮುಂದುವರಿಯುತ್ತದೆ. ಸುಡುಗಾಡು ಸಿದ್ಧ ಕುಟುಂಬಗಳಿಗೆ, ಕುರಿ ಮೇಯಿಸುವವರಿಗೆ ಉಚಿತವಾಗಿ 70 ಮಾಸ್ಕ್ ಅನ್ನು ಕೊಟ್ಟಿದ್ದೇವೆ. ಅಷ್ಟೇ ಅಲ್ಲದೆ, 3 ಸಾವಿರ ಪೇಪರ್ ಪ್ಲೇಟ್ಗಳನ್ನು ತಯಾರಿಸಿ, ಬಡವರಿಗೆ ಉಚಿತವಾಗಿ ಊಟ ಹಂಚುವ ಸಂಘ–ಸಂಸ್ಥೆಗಳಿಗೆ ನೀಡಿದ್ದೇವೆ’ ಎಂದು ಪದ್ಮಾವತಿ ಬಾಯಿಯವರ ಪುತ್ರ ಪುಂಡಲೀಕ ನಾಡಿಗೇರ ಹೇಳಿದರು.
‘ನನ್ನ ಪತಿ ದಾನ ಧರ್ಮ ಮಾಡುತ್ತಿದ್ದರು. ಅವರ ಗುಣ ನನ್ನ ಮಕ್ಕಳಿಗೂ ಬಂದಿದೆ. ಟೇಲರಿಂಗ್ ವೃತ್ತಿ ಮಾಡಿಯೇ ನನ್ನ ಮಕ್ಕಳನ್ನು ಸಾಕಿ ಬೆಳೆಸಿದ್ದೇನೆ. ಈಗ ಮಕ್ಕಳು ಸ್ವಂತ ಉದ್ಯಮ ನಡೆಸುತ್ತಾ ಚೆನ್ನಾಗಿದ್ದಾರೆ. ಹೊಲಿಗೆ ವೃತ್ತಿ ಬಿಟ್ಟು 20 ವರ್ಷ ಆಗಿತ್ತು. ಮಾರುಕಟ್ಟೆಯಲ್ಲಿ ಮಾಸ್ಕ್ ಸಿಗುತ್ತಿಲ್ಲ ಎಂಬ ಕಾರಣದಿಂದ ಉಚಿತವಾಗಿ ಮಾಸ್ಕ್ ಹೊಲಿದು ಕೊಡಲು ಮುಂದಾದೆ. ಬಡವರಿಗೆ ನನ್ನದೊಂದು ಅಳಿಲು ಸೇವೆ’ ಎಂದು ಪದ್ಮಾವತಿಬಾಯಿ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.