ADVERTISEMENT

ಸ್ಥಳಾಂತರಕ್ಕೆ ಹಿನ್ನಡೆ: ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 8:54 IST
Last Updated 17 ಸೆಪ್ಟೆಂಬರ್ 2020, 8:54 IST
ಕುಮಾರಪಟ್ಟಣ ಸಮೀಪದ ಹಳೆ ನಲವಾಗಲ ಗ್ರಾಮಕ್ಕೆ ಬುಧವಾರ ಹಾವೇರಿ ಜಿಲ್ಲಾ ಉಪ ವಿಭಾಗಾಧಿಕಾರಿ ದಿಲೀಶ್‌ ಶಶಿ ಭೇಟಿ ಗ್ರಾಮ ಸ್ಥಳಾಂತರದ ವಿಳಂಬಕ್ಕೆ ಗ್ರಾಮಸ್ಥರಿಂದ ಅಹವಾಲು ಆಲಿಸಿದರು.
ಕುಮಾರಪಟ್ಟಣ ಸಮೀಪದ ಹಳೆ ನಲವಾಗಲ ಗ್ರಾಮಕ್ಕೆ ಬುಧವಾರ ಹಾವೇರಿ ಜಿಲ್ಲಾ ಉಪ ವಿಭಾಗಾಧಿಕಾರಿ ದಿಲೀಶ್‌ ಶಶಿ ಭೇಟಿ ಗ್ರಾಮ ಸ್ಥಳಾಂತರದ ವಿಳಂಬಕ್ಕೆ ಗ್ರಾಮಸ್ಥರಿಂದ ಅಹವಾಲು ಆಲಿಸಿದರು.   

ಕುಮಾರಪಟ್ಟಣ: ಎರಡು ಊರುಗಳ ಗ್ರಾಮಸ್ಥರ ಹಿತಾಸಕ್ತಿ ಮೇರೆಗೆ ಬುಧವಾರ ಹಾವೇರಿ ಜಿಲ್ಲಾ ಉಪ ವಿಭಾಗಾಧಿಕಾರಿ ದಿಲೀಶ್‌ ಶಶಿ ಹಳೆ ನಲವಾಗಲ ಮತ್ತು ಹೊಸ ನಲನಾವಗಲ ಓಣಿಗೆ ಭೇಟಿ ನೀಡಿ ಗ್ರಾಮದ ಸ್ಥಳಾಂತರದ ಹಿನ್ನೆಡೆಗೆ ಇರುವ ಅಡೆತಡೆಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಅವರು ಮಾತನಾಡಿ, ಎರಡು ಊರುಗಳ ಪ್ರಮುಖರು ಹಾಗೂ ಗ್ರಾಸಿಂ ಕಂಪನಿ ಮುಖ್ಯಸ್ಥರನ್ನು ಕೆಲವೇ ದಿನಗಳಲ್ಲಿ ಸಭೆ ಕರೆದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಕಗ್ಗಂಟಾಗಿರುವ ಸ್ಥಳಾಂತರ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಹೊಸ ನಲವಾಗಲ ಸಂತ್ರಸ್ಥರ ಸಂಘದ ಅಧ್ಯಕ್ಷ ರಾಮಪ್ಪ ಸಾಲಕಟ್ಟಿ ಮಾತನಾಡಿ, ಗ್ರಾಸಿಂ ಕಂಪನಿಯವರು ಕೇವಲ ನೀರಿನ ಸೌಕರ್ಯ ಮಾಡಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ರಸ್ತೆ, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇನ್ನಷ್ಟು ಸೌಲಭ್ಯಗಳನ್ನು ಕಂಪನಿಯವರು ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಳೆದ 50-60 ವರ್ಷಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಗ್ರಾಸಿಂ ಕಂಪನಿ ಕೈಗಾರಿಕಾ ವಿಸ್ತರಣೆಗಾಗಿ ಇಲ್ಲಿನ ಜಮೀನು ಖರೀದಿಸಿದೆ. ಆದರೆ ನಮ್ಮ ಜಮೀನು, ಖಾಲಿ ನಿವೇಶನಗಳಿಗೆ ಸೂಕ್ತ ಮೌಲ್ಯ ಒದಗಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹೊರೆತು ಹಳೆ ಗ್ರಾಮವನ್ನು ಖಾಲಿ ಮಾಡುವುದಿಲ್ಲ ಎಂದು ಹಳೆ ನಲವಾಗಲ ಗ್ರಾಮದ ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ರಾಣೆಬೆನ್ನೂರು ತಾಲ್ಲೂಕ ತಹಶೀಲ್ದಾರ್‌ ಬಸನಗೌಡ ಕೋಟೂರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಸುಂದರ್‌ ಕಾಂಬಳೆ, ಪರಿಸರ ಮತ್ತು ನೈರ್ಮಲ್ಯ ಅಧಿಕಾರಿ ಮಹೇಶ್ವರಪ್ಪ, ಡಾ.ವಿಶ್ವಮೂರ್ತಿ ಅರ್ಕಾಚಾರಿ, ಪಿಡಿಒ ವಿಜಯಕುಮಾರ್‌ ಹನಗೋಡಿಮಠ, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಕಜ್ಜರಿ, ಬಸವರಾಜ ಗುಳೇದ, ಸ್ಥಳೀಯ ಮುಖಂಡರಾದ ಉಮೇಶ್‌ ಕೋಡಿಹಳ್ಳಿ, ರಾಮಚಂದ್ರಪ್ಪ ಮಲ್ಲಾಪುರ, ಚಂದ್ರಪ್ಪ ಹಲಗೇರಿ, ಕೃಷ್ಣಪ್ಪ.ಬಿ.ಎಚ್‌., ಕರಿಬಸಪ್ಪ ಮಲ್ಲಾಪುರ ಸೇರಿದಂತೆ ಎರಡು ಗ್ರಾಮಗಳ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.