ರಟ್ಟೀಹಳ್ಳಿ: ಪಟ್ಟಣದ ಮೂಲಕ ಹರಿಯುವ ಕುಮದ್ವತಿ ನದಿಗೆ ಕೊಳಚೆ ನೀರು ಸೇರುತ್ತಿದ್ದು, ನದಿ ನೀರು ಮಲಿನಗೊಂಡಿದೆ.
ಇಲ್ಲಿನ ಜನರ ಜೀವನಾಡಿಯಾಗಿರುವ ನದಿಯನ್ನು ವಿವಿಧ ಕಾರಣಕ್ಕೆ ಅವಲಂಬಿಸಿದ್ದರು. ಇದೀಗ ನೀರು ಮಲಿನವಾಗಿರುವುದರಿಂದ ನೀರಿನ ಬಳಕೆ ಕಡಿಮೆ ಮಾಡಿದ್ದಾರೆ. ಕುಮದ್ವತಿ ನದಿ ಸ್ವಚ್ಛತೆಗೆ ಗಮನ ಹರಿಸದ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ಲಾಸ್ಟಿಕ್ ಸೇರದಂತೆ ಎಲ್ಲಾ ರೀತಿಯ ತ್ಯಾಜ್ಯ, ಸತ್ತ ಪ್ರಾಣಿಗಳ ಕಳೇಬರ, ಮನೆಗಳ ಬಚ್ಚಲು ನೀರು ಕಾಲುವೆ ಮೂಲಕ ನದಿಗೆ ಸೇರುತ್ತಿದೆ. ತುಮ್ಮಿನಕಟ್ಟೆ ರಸ್ತೆ, ಕೋಟೆ, ಮಳಗಿ ಗ್ರಾಮದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಹರಿದುಬರುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದು, ಪ್ರಾಣಿ–ಪಕ್ಷಿಗಳಿಗೆ ಶುದ್ಧ ನೀರು ಸಿಗುವ ದೃಷ್ಟಿಯಿಂದಾದರೂ ಸ್ಥಳೀಯ ಆಡಳಿತ ಸ್ವಚ್ಛತೆಗೆ ಕ್ರಮ ವಹಿಸಬೇಕಿದೆ’ ಎಂದು ವಕೀಲ ಸುರೇಶ ಅಘನಾಶೀನಿಕರ ಆಗ್ರಹಿಸಿದರು.
‘ನದಿ ದಡದಲ್ಲಿ ಸ್ನಾನ ಮಾಡಲು, ಬಟ್ಟೆ ಒಗೆಯಲು ಅನುಕೂಲವಾಗುವಂತೆ ನಿರ್ಮಿಸಿದ್ದ ಮೆಟ್ಟಲುಗಳು ಸಂಪೂರ್ಣ ಹಾಳಾಗಿವೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ಇವೆ. ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ಕುಮದ್ವತಿ ನದಿ ರೈತರ ಜೀವನಾಡಿಯಾಗಿದೆ. ಇದೆಲ್ಲವನ್ನೂ ಸ್ಥಳೀಯ ಆಡಳಿತ ಪರಿಗಣಿಸಬೇಕು’ ಎಂದರು.
‘ಈ ಮೊದಲು ಕುಮದ್ವತಿ ನದಿಯಲ್ಲಿ ನಿತ್ಯ ಸ್ನಾನ ಮಾಡುದ್ದೆವು. ಈಗ ನದಿ ನೀರು ಮಲಿನವಾಗಿದೆ. ನದಿ ಶುದ್ಧಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಕೊಳಚೆ ನೀರು, ತ್ಯಾಜ್ಯ ನದಿಗೆ ಸೇರದಂತೆ ತಡೆಯಬೇಕು’ ಎಂದು ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ನಾಡಗೇರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.