
ಸಾವು
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಶಿಗ್ಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರ ನಡೆದ ಗಲಾಟೆಯಲ್ಲಿ ಅಸ್ವಸ್ಥಗೊಂಡಿದ್ದರು ಎನ್ನಲಾದ ಮಹ್ಮದ್ ರಫೀಕ್ ಕಳಸಗೇರಿ (52) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
‘ಧಾರವಾಡ ಸತ್ತೂರಿನ ನಿವಾಸಿ ರಫೀಕ್, ಸ್ನೇಹಿತ ಮುಸ್ತಾಕ ಮುಲ್ಲಾ ಜೊತೆ ಹಣಕಾಸು ವ್ಯವಹಾರ ಇಟ್ಟುಕೊಂಡಿದ್ದರು. ಅದೇ ವಿಚಾರವಾಗಿ ಮಾತನಾಡಲು ಶಿಗ್ಗಾವಿಗೆ ಸೋಮವಾರ ಬಂದಿದ್ದಾಗ ಗಲಾಟೆ ಆಗಿದೆ. ಅಸ್ವಸ್ಥಗೊಂಡ ರಫೀಕ್ ಚಿಕಿತ್ಸೆ ಪಡೆದು ಶಿಗ್ಗಾವಿಯಲ್ಲಿರುವ ತಮ್ಮನ ಮನೆಯಲ್ಲಿದ್ದರು. ಅಲ್ಲಿಯೇ ಅಸ್ವಸ್ಥಗೊಂಡಿದ್ದರು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ಹೇಳಿದರು.
ಎಸ್.ಪಿ. ಯಶೋಧಾ ವಂಟಗೋಡಿ, ‘ರಫೀಕ್ ಪತ್ನಿ ನೀಡಿರುವ ದೂರು ಆಧರಿಸಿ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆಯಿಂದ ನಿಖರ ಸಂಗತಿ ತಿಳಿಯಬೇಕಿದೆ’ ಎಂದರು.
ಸಂಧಾನದ ಮಾತು: ‘ರಫೀಕ್ ಹಾಗೂ ಅವರ ಸ್ನೇಹಿತನ ನಡುವೆ ಆರ್ಥಿಕ ವ್ಯವಹಾರವಿತ್ತು. ಅದೇ ವಿಚಾರವಾಗಿ ಸೋಮವಾರ ಜೋರು ಗಲಾಟೆ ನಡೆದಿತ್ತು. ಇದೇ ಸಂದರ್ಭದಲ್ಲಿ ರಫೀಕ್ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದರು’ ಎಂದು ಸ್ಥಳೀಯರೊಬ್ಬರು ಹೇಳಿದರು.
‘ಮನೆಯಲ್ಲಿ ರಫೀಕ್ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ದಾಗ, ಮೃತಪಟ್ಟಿರುವುದು ಗೊತ್ತಾಗಿದೆ. ಗಲಾಟೆಯಲ್ಲಾದ ಹಲ್ಲೆಯಿಂದ ಮೃತಪಟ್ಟಿದ್ದಾರೆಯೋ ಅಥವಾ ಬೇರೆ ಕಾರಣವೇನಾದರೂ ಇದೆಯಾ ? ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಕೆಲವರು ಸಂಧಾನದ ಮೂಲಕ ಪ್ರಕರಣ ಮುಕ್ತಾಯಗೊಳಿಸಲು ಪ್ರಯತ್ನಿಸುತ್ತಿರುವ ಮಾಹಿತಿಯಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.