ಹಾವೇರಿ: ‘ಸಂಗೂರಿನ ಸಕ್ಕರೆ ಕಾರ್ಖಾನೆಗೆ ಅಧ್ಯಕ್ಷರಾಗಿದ್ದ ಸಿ.ಎಂ. ಉದಾಸಿ ಮತ್ತು ಉಪಾಧ್ಯಕ್ಷರಾಗಿದ್ದ ಶಿವರಾಜ ಸಜ್ಜನರ ಇಬ್ಬರೂ ಸೇರಿಕೊಂಡುಶುಗರ್ ಫ್ಯಾಕ್ಟರಿ ನುಂಗಿ ನೀರು ಕುಡಿದ್ರು. ಖಾಲಿ ಚೀಲವನ್ನೂ ಬಿಡದೆ ಮಾರಿಕೊಂಡ ಸಜ್ಜನರಿಗೆ ಚುನಾವಣೆಯಲ್ಲಿ ಖಾಲಿ ಚೀಲ ಕೊಟ್ಟು ಮನೆಗೆ ಕಳುಹಿಸಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾನಗಲ್ ತಾಲ್ಲೂಕು ಮಲಗುಂದ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಶುಗರ್ ಫ್ಯಾಕ್ಟರಿ ಹಾಳಾಗೋಕೆ ಸಜ್ಜನರೇ ಕಾರಣ.ಹಾವೇರಿ ತಾಲ್ಲೂಕು ಗೌರಾಪುರದಲ್ಲಿ 21 ಎಕರೆ ಸರ್ಕಾರಿ ಜಾಗವನ್ನು ಸಜ್ಜನರ ಕಡಿಮೆ ದರಕ್ಕೆ ಖರೀದಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಿದ್ದಾರೆ.ಆತ ತಿಂದಿರೋದೆಲ್ಲಾ ಕಕ್ಕಿಸಬೇಕು. ಆತ ಸಜ್ಜನ ಅಲ್ಲ ದುರ್ಜನ’ ಎಂದು ಟೀಕಿಸಿದರು.
ಈ ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಸಿ.ಎಂ. ಉದಾಸಿ 2023ರವರೆಗೆ ಶಾಸಕರಾಗಿರಲಿ ಎಂದು ಬಯಸಿದ್ದೆವು. ಆದರೆ ದುರ್ದೈವ ಅವರು ನಮ್ಮಗಲಿದ್ದಾರೆ.2018ರ ಚುನಾವಣೆಯಲ್ಲಿ ಮಾನೆ ಅವರು 6000 ಮತಗಳಿಂದ ಸೋತರು. ಆದರೂ ಕ್ಷೇತ್ರವನ್ನು ಬಿಡದೆ, ಕೋವಿಡ್ ಸಂದರ್ಭ ಮತದಾರರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಸಿ.ಎಂ. ಉದಾಸಿ ಅವರು ಕಾಯಿಲೆಯಿಂದ ಹಾಸಿಗೆ ಹಿಡಿದ್ರೂ, ಸಂಸದ ಶಿವಕುಮಾರ ಉದಾಸಿ ಕ್ಷೇತ್ರದ ಕಡೆ ತಲೆ ಹಾಕಲಿಲ್ಲ ಎಂದು ಜರಿದರು.
ನಮ್ಮ ಶಾಸಕರನ್ನು ತೆಗೆದುಕೊಂಡು ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಧಿಕಾರದಲ್ಲಿದ್ದಾರಾ? ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಬಳಿ ಗೋಗರೆದುಕೊಂಡಿದ್ದಾರೆ. ಹೀಗಾಗಿ, ಅವರೆಲ್ಲ ನಾಳೆ ಕ್ಷೇತ್ರಕ್ಕೆ ಮತ ಕೇಳೋಕೆ ಬರಬಹುದು ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.