ಶಿಗ್ಗಾವಿ: ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಶುಕ್ರವಾರ ಭೇಟಿ ನೀಡಿ, ಬಿತ್ತನೆ ಬೀಜ ಸಂಗ್ರಹದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ತಾಲ್ಲೂಕಿನಲ್ಲಿರುವ ದುಂಡಸಿ, ಬಂಕಾಪುರ ಹಾಗೂ ಶಿಗ್ಗಾವಿ ರೈತ ಸಂಪರ್ಕ ಕೇಂದ್ರದಲ್ಲಿ ಯಾವುದೇ ಬಿತ್ತನೆ ಬೀಜದ ಕೊರತೆ ಆಗಬಾರದು. ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಬೇಕು. ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜಕ್ಕಾಗಿ ರೈತರು ಅಲೆದಾಡದಂತೆ ಆಗಬಾರದು. ರೈತರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿರುವ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿದ ಅವರು, ಡಿಎಪಿ, ಯೂರಿಯಾ ಸೇರಿದಂತೆ ಯಾವೆಲ್ಲ ಗೊಬ್ಬರಗಳು ಎಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿವೆ, ಈವರೆಗೆ ಎಷ್ಟು ರೈತರಿಗೆ ವಿತರಿಸಲಾಗಿದೆ ಎಂಬುದರ ಪರಿಶೀಲನೆ ನಡೆಸಿದರು.
‘ಬಂಕಾಪುರ ಹಂಸ್ ಆಗ್ರೋ ಕೇಂದ್ರದಲ್ಲಿ ಡಿಎಪಿ ಗೊಬ್ಬರ ಸಂಗ್ರಹವಿದ್ದರೂ, ನಮಗೆ ನೀಡಲಿಲ್ಲ. ಬಿತ್ತನೆಗೆ ಡಿಎಪಿ ಗೊಬ್ಬರ ಸಿಗಲಿಲ್ಲ. ಆದರೆ, ಅಂಗಡಿಯವರು ಬೇರೆ ರೈತರಿಗೆ ಡಿಎಪಿ ಗೊಬ್ಬರ ವಿತರಿಸಿದ್ದಾರೆ. ಗೊಬ್ಬರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ’ ಎಂದು ತಾಲ್ಲೂಕಿನ ಶಿಡ್ಲಾಪುರ ಗ್ರಾಮದ ರೈತ ಹನುಮಂತಪ್ಪ ಕಲಕಟ್ಟಿ ಆರೋಪಿಸಿದರು.
‘ಇದರಿಂದ ಸಣ್ಣ ರೈತರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಯಾರಿಗೆ ದೂರ ಸಲ್ಲಿಸಬೇಕೆಂದೂ ತಿಳಿಯದಾಗಿದೆ. ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ರಸಗೊಬ್ಬರ ಸಂಗ್ರಹದ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಹಾಕಬೇಕು. ರೈತರಲ್ಲಿ ತಾರತಮ್ಯ ಮಾಡಬಾರದು. ದರ ಪಟ್ಟಿಯಲ್ಲಿ ಬದಲಾವಣೆ ಆಗಬಾರದು. ಸರ್ಕಾರ ನಿಗದಿಪಡಿಸಿದ ದರದಲ್ಲೇ ರಸಗೊಬ್ಬರ ವಿತರಣೆ ಮಾಡಬೇಕು’ ಎಂದು ಹೇಳಿದರು.
‘ರೈತರು ಖರೀದಿ ಮಾಡಿದ ರಸಗೊಬ್ಬರಕ್ಕೆ ರಸೀದಿ ನೀಡಬೇಕು. ಇಲ್ಲವಾದರೆ, ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ರೈತರು ಸಹ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಅಂತರವಳ್ಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಗಜ್ಲೆ, ಬಂಕಾಪುರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶ್ರೀಧರ ದಾಸರ, ಉಪ ತಹಶೀಲ್ದಾರ್ ವೆಂಕಟೇಶ ಕುಲಕರ್ಣಿ, ಪುರಸಭೆ ಅಧಿಕಾರಿ ಬಿ.ಎಸ್. ಗಿಡ್ಡಣ್ಣವರ, ಡಿ.ಎಚ್. ನದಾಫ್, ರೈತ ಮುಖಂಡರಾದ ದೇವಣ್ಣ ಹಳವಳ್ಳಿ, ಶಂಭಣ್ಣ ಕುರಗೋಡಿ, ಮಾಲತೇಶ ಕೋರಿ, ಮಂಜು ಸವೂರ ಇದ್ದರು.
ಬಂಕಾಪುರದ ಶ್ರೀಧರ ಟ್ರೇಡರ್ಸ್ ರಸಗೊಬ್ಬರ ಅಂಗಡಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬೀಜ ಮತ್ತು ಗೊಬ್ಬರ ವಿತರಣೆ ಮಾಡಿರುವ ಸರಿಯಾದ ದಾಖಲೆ ಇಲ್ಲದ್ದು ಗಮನಕ್ಕೆ ಬಂದಿತು. ‘ಹಣ ಗೊಬ್ಬರ ಸಂಗ್ರಹ ಕುರಿತು ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಜಾರಿಗೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಂಕಾಪುರದ ಸರ್ಕಾರಿ ಪಶು ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ‘ ಆಕಳು ಸತ್ತು ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಕಚೇರಿಗೆ ಅಲೆದಾಡಿ ಸಾಕಾಗಿದೆ’ ಎಂದು ರೈತ ಶಂಭು ಕುರಗೋಡಿ ಅಲವತ್ತುಕೊಂಡರು. ದೂರವಾಣಿ ಮೂಲಕ ಶಿಗ್ಗಾವಿ ಪಶುವೈದ್ಯಾಧಿಕಾರಿ ರಾಜೇಂದ್ರ ಅರಳೇಶ್ವರ ಜತೆ ಮಾತನಾಡಿದ ಡಿ.ಸಿ ‘ಇಲ್ಲಿ ಪಶು ಆಸ್ಪತ್ರೆಗೆ ಬರುವ ಜಾನುವಾರುಗಳಿಗೆ ಇಲ್ಲಿನ ಸಿಬ್ಬಂದಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ವಾರದಲ್ಲಿ ಎರಡು ದಿನ ಇಲ್ಲಿ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು. ಅಪೂರ್ಣಗೊಂಡ ಇಂದಿರಾ ಕ್ಯಾಂಟೀನ್ ಕಟ್ಟಡ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ‘ಜಿಲ್ಲೆಗೆ ಮಂಜೂರಾದ 10 ಕ್ಯಾಂಟೀನ್ಗಳ ಪೈಕಿ ಈಗಾಗಲೇ ಮೂರು ಆರಂಭವಾಗಿದ್ದು ಉಳಿದ ಏಳು ಕ್ಯಾಂಟೀನ್ಗಳನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.