ADVERTISEMENT

ರೋಗ ನಿಯಂತ್ರಣ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಡಾ.ಕೆ.ಎಂ. ಇಂದಿರೇಶ್‌ ಸಲಹೆ

ರಾಜ್ಯಮಟ್ಟದ ಮೆಣಸಿನಕಾಯಿ ಬೆಳೆಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 14:21 IST
Last Updated 30 ಜನವರಿ 2021, 14:21 IST
ದೇವಿಹೊಸೂರಿನ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ರಾಜ್ಯಮಟ್ಟದ ಮೆಣಸಿನಕಾಯಿ ಬೆಳೆಯ ವಿಚಾರ ಸಂಕಿರಣ’ವನ್ನು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಉದ್ಘಾಟಿಸಿದರು 
ದೇವಿಹೊಸೂರಿನ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ರಾಜ್ಯಮಟ್ಟದ ಮೆಣಸಿನಕಾಯಿ ಬೆಳೆಯ ವಿಚಾರ ಸಂಕಿರಣ’ವನ್ನು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಉದ್ಘಾಟಿಸಿದರು    

ಹಾವೇರಿ: ‘ಕೀಟ ಹಾಗೂ ರೋಗ ನಿಯಂತ್ರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿಜ್ಞಾನಿಗಳಿಂದ ಸಕಾಲದಲ್ಲಿ ಮಾಹಿತಿಯನ್ನು ಪಡೆಯುವ ಮೂಲಕ ಮೆಣಸಿನಕಾಯಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬಹುದು’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ. ಇಂದಿರೇಶ್‌ ಅಭಿಪ್ರಾಯಪಟ್ಟರು.

ದೇವಿಹೊಸೂರಿನ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ‘ರಾಜ್ಯಮಟ್ಟದ ಮೆಣಸಿನಕಾಯಿ ಬೆಳೆಯ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯದಿಂದ ಬಿಡುಗಡೆಗೊಳಿಸಿದ ‘ರುದ್ರ’ ಒಣಮೆಣಸಿನಕಾಯಿ ತಳಿ, ‘ಶುಕ’ ಎಂಬ ಹಸಿ ಮೆಣಸಿನಕಾಯಿ ತಳಿ ಹಾಗೂ ‘ಸಂಕರಣ’ ತಳಿಯನ್ನು ಬೆಳೆದು ಹೆಚ್ಚು ಲಾಭ ಗಳಿಸಬಹುದು ಎಂದರು.

ADVERTISEMENT

ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿರುವ ಮೆಣಸಿನಕಾಯಿ ಬೆಳೆಯ ಕ್ಷೇತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಮೆಣಸಿನಕಾಯಿ ಮಾರುಕಟ್ಟೆಯ ಬೇಡಿಕೆ ತಳಿಗಳು, ಗುಣಮಟ್ಟ ಹಾಗೂ ಮೆಣಸಿನ ಕಾಯಿ ಸಂಸ್ಕರಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಮೆಣಸಿನಕಾಯಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಕೃಷ್ಣಾ ಕುರುಬೆಟ್ಟ, ರೋಗಗಳು ಮತ್ತು ನಿರ್ವಹಣೆ ಬಗ್ಗೆ ಡಾ.ರವಿಕುಮಾರ ಬಿ., ಕೀಟಗಳು ಮತ್ತು ನಿರ್ವಹಣೆ ಬಗ್ಗೆ ಡಾ.ವಿನಯಕುಮಾರ ಎಂ.ಎಂ., ಮಾರುಕಟ್ಟೆ ಮತ್ತು ಮಾರಾಟದ ಬಗ್ಗೆ ಡಾ.ಶ್ರೀಪಾದ ವಿಶ್ವೇಶ್ವರ, ಕೊಯ್ಲೋತ್ತರ ತಂತ್ರಜ್ಞಾನಗಳ ಬಗ್ಗೆ ಡಾ.ತಿಪ್ಪಣ್ನ ಕೆ.ಎಸ್‌., ಗುಣಮಟ್ಟದ ನಿರ್ವಹಣೆ ಬಗ್ಗೆ ಸಂತೋಷ ಎರಗಂಬಳಿಮಠ ಮಾಹಿತಿ ನೀಡಿದರು.

ಡೀನ್‍ ಡಾ.ಲಕ್ಷೀನಾರಾಯಣ ಹೆಗಡೆಯವರು ಸ್ವಾಗತಿಸಿದರು. ಚಿದಾನಂದಪ್ಪ ಪಿ.ಜಿ.,ಡಾ.ವೈ.ಕೆ. ಕೋಟಿಕಲ್, ಡಾ.ಡಿ.ಆರ್. ಪಾಟೀಲ್, ಡಾ.ಶಾಂತಪ್ಪ ತಿರಕಣ್ಣನವರ, ಪ್ರಗತಿಪರ ರೈತ ಮಲ್ಲೇಶಪ್ಪ ಬಿಸಿರೊಟ್ಟಿ ಮಾತನಾಡಿದರು.ವಿಚಾರ ಸಂಕಿರಣದಲ್ಲಿ 400ಕ್ಕೂ ಅಧಿಕ ಮೆಣಸಿನಕಾಯಿ ಬೆಳೆಗಾರರು ಹಾಗೂ ವರ್ತಕರು ವಿಜ್ಞಾನಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ರಾಜ್ಯಕ್ಕೆ ಎರಡನೇ ಸ್ಥಾನ

‘2019-20ರಲ್ಲಿ 4.84 ಲಕ್ಷ ಟನ್ ಮೆಣಸಿನಕಾಯಿ ಹಾಗೂ ಅದರ ಉತ್ಪನ್ನಗಳನ್ನು ಪ್ರಪಂಚದ ವಿವಿಧ ದೇಶಗಳಿಗೆ ರಫ್ತು ಮಾಡಿ ಸುಮಾರು ₹6,622 ಕೋಟಿ ವಹಿವಾಟನ್ನು ಈ ಒಂದೇ ಬೆಳೆಯಿಂದ ಭಾರತವು ಮಾಡಿದೆ’ ಎಂದುದೇವಿಹೊಸೂರ ತೋಟಗಾರಿಕಾ ಕೇಂದ್ರದ ಮುಖ್ಯಸ್ಥಡಾ.ಪ್ರಭುದೇವ ಅಜ್ಜಪ್ಪಳವರ ಹೇಳಿದರು.

ಪ್ರಪಂಚದ ಉತ್ಪಾದನೆಗೆ ಭಾರತದ ಪಾಲು ಪ್ರತಿಶತ 25ರಿಂದ 26ರಷ್ಟಿದೆ. ಉತ್ಪಾದನೆಯಲ್ಲಿ ಅಖಂಡ ಆಂಧ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. 1991-92ರಲ್ಲಿನ ಉತ್ಪಾದನಾ ಗಾತ್ರಕ್ಕೆ ಹೋಲಿಸಿದಾಗ ರಾಷ್ಟ್ರಮಟ್ಟದ ಉತ್ಪಾದನಾ ಗಾತ್ರ ಪ್ರತಿಶತ 68ರಷ್ಟು ಹೆಚ್ಚಾದರೆ, ರಾಜ್ಯದ ಉತ್ಪಾದನಾ ಮಟ್ಟ ಪ್ರತಿಶತ 20ರಷ್ಟು ಕುಸಿದಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.