ಹಾವೇರಿ: ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳ ಭೌತಿಕ ಪರಿಶೀಲನೆ ಕಾರ್ಯವನ್ನು ನಾಳೆಯೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ಗಳಿಗೆಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.
ವಿವಿಧ ತಾಲ್ಲೂಕುತಹಶೀಲ್ದಾರ್ಗಳೊಂದಿಗೆ ಸೋಮವಾರ ಸಂಜೆ ವಿಡಿಯೊ ಸಂವಾದ ನಡೆಸಿದ ಅವರು ಮನೆ ಹಾನಿ ಕುರಿತಂತೆ ತಾಲ್ಲೂಕುಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವ ಪೂರ್ವದಲ್ಲಿ ನಿಖರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಕೆಗೆ ಸೂಚನೆ ನೀಡಿದರು.
ಮನೆಹಾನಿ ಪರಿಹಾರ ಕುರಿತಂತೆ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಅನುಸಾರ ಸಮೀಕ್ಷೆ ನಡೆಸಬೇಕು. ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಂಜಿನಿಯರ್ಗಳು ಸ್ಥಳಕ್ಕೆ ಕಡ್ಡಾಯವಾಗಿ ಭೇಟಿ ನೀಡಿ ಫೋಟೋ ಸಹಿತ ವರದಿ ಸಲ್ಲಿಸಬೇಕು. ಈ ವರದಿ ಆಧರಿಸಿ ತಹಶೀಲ್ದಾರ್ ಪರಿಶೀಲನೆ ಮಾಡಿ ದೃಢೀಕರಿಸಿ ಕಳುಹಿಸಬೇಕು. ವಾಸ ಇಲ್ಲದ ಮನೆ ಬಿದ್ದರೆ ಪರಿಹಾರಕ್ಕೆ ಅವಕಾಶವಿರುವುದಿಲ್ಲ. ದನದ ಕೊಟ್ಟಿಗೆ ಬಿದ್ದರೆ ನಿಯಮಾವಳಿ ಅನುಸಾರ ಅದಕ್ಕೆ ಪ್ರತ್ಯೇಕ ಪರಿಹಾರಕ್ಕೆ ಅವಕಾಶವಿದೆ. ಯಾವುದೇ ಗೊಂದವಿಲ್ಲದಂತೆ ನಿಖರವಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ರಾಜೀವಗಾಂಧಿ ವಸತಿ ನಿಗಮದ ಫೋರ್ಟೆಲ್ನಲ್ಲಿ ಮನೆ ಹಾನಿಯ ವಿವರವನ್ನು ಅಪ್ಲೋಡ್ ಮಾಡುವ ಮುನ್ನ ತಹಶೀಲ್ದಾರ್ ಹಂತದಲ್ಲಿ ಸರಿಯಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಾನಿಯಾದ ಮೂಲಸೌಕರ್ಯಗಳ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಮಳೆಹಾನಿ ತಾಲ್ಲೂಕು ನೋಡಲ್ ಅಧಿಕಾರಿಗಳು ಹಾಗೂ ವಿಡಿಯೊ ಸಂವಾದದ ಮೂಲಕ ವಿವಿಧ ತಹಶೀಲ್ದಾರಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.