ಹಾವೇರಿ: ನಗರದ ನೆಹರೂಯುವ ಕೇಂದ್ರದ ವತಿಯಿಂದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಓಂ ಯುವಕ ಸಂಘದ ಆಶ್ರಯದಲ್ಲಿ ಶನಿವಾರ ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನ ಆಚರಿಸಲಾಯಿತು.
ಅಂತರರಾಷ್ಟ್ರೀಯ ಸ್ವಯಂಸೇವಕರ ಪ್ರತಿನಿಧಿಕಿರಣ್ ಕುಮಾರ್ ದೊಡ್ಮನಿ ಮಾತನಾಡಿ, ‘ಸ್ವಯಂ ಸೇವಕ ಎಂದರೆ ತನ್ನ ಅಂತರಂಗದ ಪ್ರೇರಣೆಯಿಂದ ಸಮಾಜದ ಸೇವೆ ಮಾಡುವವನು ಎಂದರ್ಥ. ಆತ ಯಾವುದೇ ಸ್ವಾರ್ಥಗಳಿಲ್ಲದೆ, ಪ್ರಚಾರದ ಗೀಳಿಲ್ಲದೆ, ಯಾವುದರ ಹಂಗೂ ಇಲ್ಲದೆ ಸೇವಾ ಯಜ್ಞದಲ್ಲಿ ತನ್ನನ್ನು ತಾನು ದಹಿಸಿಕೊಂಡು ಸಮಾಜಕ್ಕೆ ಬೆಳಕಾಗುವನು’ ಎಂದರು.
‘ಸಮಾಜಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ಸಂಘಟನೆಯಾದ ಆರ್.ಎಸ್.ಎಸ್ ಇಂದು 5-6 ಮಿಲಿಯನ್ ಸ್ವಯಂ ಸೇವಕರನ್ನು ಹೊಂದಿದೆ. ‘ಕಲಿಯುಗೇ ಸಂಘೇನ ಶಕ್ತಿ’ ಎನ್ನುವಂತೆ ಈ ಕಾಲಘಟ್ಟದಲ್ಲಿ ಸಂಘಟನೆ ಮತ್ತು ಸ್ವಯಂ ಸೇವಕರದ್ದೇ ಪ್ರಾಬಲ್ಯವಿದೆ’ ಎಂದರು.
ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಅಧಿಕಾರಿಗಳಾದ ರಮೇಶ್ ನಾಯಕ್ ಮತ್ತು ಎಸ್.ಎಸ್. ಶಿವಣ್ಣನವರ,ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಭುಕ್ಯಾ ಸಂಜೀವ್, ನೆಹರೂ ಯುವ ಕೇಂದ್ರದ ತಾಲ್ಲೂಕು ಕಾರ್ಯಕರ್ತರಾದ ವಿವೇಕಾನಂದ ಎಸ್. ಇಂಗಳಗಿ, ಓಂ ಸಂಘದ ಅಧ್ಯಕ್ಷ ಗಣೇಶ್ ರಾಯ್ಕರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.