ರಾಣೆಬೆನ್ನೂರು: ‘ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟ. ನಮ್ಮಲ್ಲಿ ಜಾತಿ, ಮತ ಯಾವುದೂ ಇಲ್ಲ. ಕಾಂಗ್ರೆಸ್ ಪಕ್ಷ ತುಂಬಿದ ಕುಟುಂಬವೇ ಹೊರತು ಬಿಜೆಪಿಯವರಂತೆ ಮನೆಯೊಂದು ಮೂರು ಬಾಗಿಲು ಅಲ್ಲ’ ಎಂದು ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಹೇಳಿದರು.
ನಗರದ ಆದಿಶಕ್ತಿ ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯ್ತಿಗೆ ಆಯ್ಕೆ ಆದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಬಿಜೆಪಿ ನಾಯಕರದ್ದು ಒಡೆದು ಆಳುವ ನೀತಿ. ಚುನಾವಣೆಯಲ್ಲಿ ರಾಜಕೀಯ ರಣತಂತ್ರ ರೂಪಿಸಿದ್ದರಿಂದ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬೀಗುತ್ತಿದ್ದಾರೆ. ಅದು ರಾಜಕೀಯ ರಣತಂತ್ರವಲ್ಲ. ರಾಜಕೀಯ ಕುತಂತ್ರ. ಹಣ, ಹೆಂಡದ ಹೊಳೆಯನ್ನು ಹರಿಸಿ ಮತದಾರರ ದಿಕ್ಕು ತಪ್ಪಿಸಿದ್ದಾರೆ’ ಎಂದು ದೂರಿದರು.
‘ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆ ಮತ್ತು ಬಲವರ್ಧನೆಗೆ ಎಲ್ಲ ಮುಖಂಡರು, ಕಾರ್ಯಕರ್ತರು ಕೈ ಜೋಡಿಸಬೇಕು. ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಅಭಿವೃದ್ಧಿಯನ್ನು ಬಿಟ್ಟರೆ ಇಂದಿಗೂ ಬೇರೆ ಅಭಿವೃದ್ಧಿ ಕಾಣುತ್ತಿಲ್ಲ’ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಸದಸ್ಯ ಶಿವಾನಂದ ಕನ್ನಪ್ಪಳವರ, ಕೃಷ್ಣಪ್ಪ ಕಂಬಳಿ, ಮಂಜನಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ರವೀಂದ್ರಗೌಡ ಪಾಟೀಲ, ಚಂದ್ರಪ್ಪ ಬೇಡರ, ಬಸನಗೌಡ ಮರದ, ಶೇರ್ಖಾನ್ ಕಾಬೂಲಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಲಮಾಣಿ, ಇಕ್ಬಾಲ್ಸಾಬ್ ರಾಣೆಬೆನ್ನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.