ಹಾವೇರಿ:ಪಟ್ಟಣದ ವೀರಭದ್ರೇಶ್ವರ ಬಡಾವಣೆಯಲ್ಲಿ ಸೋಮವಾರ ಹಾವೇರಿ ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮತ್ತು ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ್ ಗುಡ್ಡದರವರು ನೆರವೇರಿಸಿದರು.
ಶಾಸಕ ನೆಹರೂ ಓಲೇಕಾರ ಮಾತನಾಡಿ, ‘ವಿದ್ಯುತ್ ಗುತ್ತಿಗೆದಾರರ ಸಂಘ ಕ್ರಿಯಾಶೀಲವಾಗಿದ್ದು ಸಂಘಟಿತ ಹೋರಾಟ ಹಾಗೂ ಸಂಘಟನೆ ಫಲವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿ ಉದ್ಘಾಟನೆ ಮಾಡಿದ್ದು ಅಭಿನಂದನೀಯ. ಈ ಕಟ್ಟಡದ ಮುಂದಿನ ಕಾಮಗಾರಿಗಾಗಿ ಶಾಸಕರ ನಿಧಿಯಿಂದ ₹5 ಲಕ್ಷಗಳ ಅನುದಾನ ಕೊಡುವುದಾಗಿ ಘೋಷಣೆ ಮಾಡಿದರು. ನಿಮ್ಮ ಸಂಘ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಲಿ ಎಂದು ಸಲಹೆ ನೀಡಿದರು.
ನಗರಸಭಾ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿ, ‘ಕೋಟಿಗಟ್ಟಲೆ ಕಾಮಗಾರಿ ಮಾಡುವ ಸಿವಿಲ್ ಗುತ್ತಿಗೆದಾರರ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದು ಬೇಸರ ತರಿಸಿತ್ತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತಿಗೆ ವಿದ್ಯುತ್ ಗುತ್ತಿಗೆದಾರರ ಸಂಘ ನಿದರ್ಶನವಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾವೇರಿ ಜಿಲ್ಲೆಯ ಪ್ರತಿನಿಧಿ ಮಂಜಣ್ಣ ವಿ ಮಣ್ಣಣ್ಣವರ, ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿದರು.
ಹೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷರಾದ ವಿಜಯಕುಮಾರ್ ಮುದಕಣ್ಣನವರ, ರಾಜ್ಯ ಉಪಾಧ್ಯಕ್ಷ ಪುರುಷೋತ್ತಮ್, ರಾಜ್ಯ ಕಟ್ಟಡ ಸಮಿತಿಯ ಅಧ್ಯಕ್ಷ ಕುಮಾರ್ ಹೆಸ್ಕಾಂ ವಿವಿಧ ಅಧಿಕಾರಿಗಳು ಸಂಘದ ಹಾಲಿ ಮತ್ತು ಮಾಜಿ ವಿವಿಧ ಪ್ರತಿನಿಧಿಗಳು ಮಾತನಾಡಿದರು. ರಾಜ್ಯ ಮತ್ತು ಜಿಲ್ಲೆ, ತಾಲ್ಲೂಕು ಸಂಘದ ಪದಾಧಿಕಾರಿಗಳು, ಗುತ್ತಿಗೆದಾರ ಸದಸ್ಯರನ್ನು ಸನ್ಮಾನಿಸಲಾಯಿತು. ಕಟ್ಟಡ ಸಮಿತಿಯ ಅಧ್ಯಕ್ಷ ಸಿ.ಪಿ. ಮೈದೂರು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.