ಶಿಗ್ಗಾವಿ: ಯುಗಾದಿ ಹಬ್ಬದ ಅಂಗವಾಗಿ ಭಾನುವಾರ ನಡೆದ ಬಿರಲಿಂಗೇಶ್ವರ ದೇವರ ಮೂರ್ತಿ ಮೆರವಣಿಗೆಗೆ ಕೆಂಡದಮಠದ ಸಿದ್ಧಯ್ಯ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆ ಸಕಲ ವಾದ್ಯ ವೈಭವಗಳೋಂದಿಗೆ ಕೆಂಡದಮಠದಿಂದ ಆರಂಭಗೊಂಡು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಾಗಿಬಂತು. ಮೆರವಣಿಗೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡು, ಪೂಜೆ ಸಲ್ಲಿಸುವ ಮೂಲಕ ಭಕ್ತಿ ನಮನ ಸಲ್ಲಿಸಿದರು.
ಮೆರವಣಿಗೆಯ ಉದ್ದಕ್ಕೂ ಗೊರಪ್ಪ, ಗೊರಮ್ಮನವರಿಂದ ಚವರಿ ಸೇವೆ, ಕುದರಿ ಸೇವೆ ನಡೆಯಿತು. ಭಕ್ತರು ಇಷ್ಟಾರ್ಥ ಈಡೇರಿದ್ದಕ್ಕಾಗಿ ಬೀರಪ್ಪ ದೇವರಿಗೆ ಪ್ರಸಾದ ಸೇವೆ, ಡೋಣಿ ತುಂಬಿಸುವ ಸೇವೆ, ಅನ್ನಪ್ರಸಾದ ಸೇವೆ ಮಾಡಿ ಭಕ್ತಿ, ಭಾವ ಮೆರೆದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಬೀರಲಿಂಗೇಶ್ವರನಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯ ನೆರವೇರಿದವು. ಭಕ್ತಸಮೂಹದಿಂದ ಬೀರಲಿಂಗೇಶ್ವರನಿಗೆ ‘ತಣ್ಣಂಬಲಿ’ ಸೇವೆ ನಡೆಯಿತು.
ಮುಖಂಡರಾದ ಮಲ್ಲಪ್ಪ ಕಟಗಿ, ನಿಂಗಪ್ಪ ಸವೂರ, ಎನ್.ಬಿ. ಮಾಯಣ್ಣವರ, ಚಿಕ್ಕನಗೌಡ ಪಾಟೀಲ, ಯಲ್ಲಪ್ಪ ದ್ವಾಸಿ, ಶಿವಾನಂದ ದ್ವಾಸಿ, ಶಿವಣ್ಣ ಈರಪ್ಪನವರ, ಆನಂದ ಮಾಗಿ, ಶಿವಾನಂದ ಮಾಗಿ, ಮಂಜು ಈರಪ್ಪನವರ, ಎನ್.ಬಿ.ಕಟಗಿ, ಕುಶಪ್ಪ ಹುಲಗೂರ, ಗುರುಶಾಂತಪ್ಪ ದ್ವಾಸಿ, ಮಣಿಕಂಠ ಗುರಮ್ಮನವರ, ಮಂಜುನಾಥ ಕೊಡದ, ಅಜ್ಜಪ್ಪ ಡಬ್ಬುನವರ, ನೀಲಪ್ಪ ಪುಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.