ಹಾವೇರಿ: 2019-2022ನೇ ಸಾಲಿನಲ್ಲಿ ರೈತರು ವಿವಿಧ ಬೆಳೆಗಳಿಗೆ ಕಟ್ಟಿದ್ದ ಬೆಳೆ ವಿಮೆ ಮಂಜೂರಾಗಿದೆ. ಆದರೆ ಕೆಲವು ರೈತರು ಮೃತಪಟ್ಟಿದ್ದರಿಂದ ಅವರಿಗೆ ಮಂಜೂರಾದ ವಿಮೆ ಹಣವನ್ನು ತಡೆಹಿಡಿಯಲಾಗಿದ್ದು, ಸಂಬಂಧಿಸಿದ ರೈತರ ಕುಟುಂಬದವರ ಬ್ಯಾಂಕ್ ಖಾತೆಗೆ ವಿಮೆ ಹಣ ಜಮೆ ಮಾಡುವಂತೆ ಭೂವಿಪುತ್ರ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಭೂಮಿಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಗಾಜಿಗೌಡ್ರ, ‘ತಾಲ್ಲೂಕಿನ ಕನಕಾಪುರ ಗ್ರಾಮದ ಶಂಕರಗೌಡ ಗಾಜೀಗೌಡ್ರ ತಮ್ಮ ತಂದೆ ಶಂಕರಗೌಡ ಹೆಸರಲ್ಲಿ 7 ಎಕರೆ ಜಮೀನಿನ 2021-2022ನೇ ಸಾಲಿನ ಬೆಳೆ ವಿಮೆ ಕಟ್ಟಿದ್ದು, ಒಟ್ಟು ₹1,35,000 ಸಾವಿರ ವಿಮೆ ಮಂಜೂರಾಗಿದೆ. ಆದರೆ ಗಾಜೀಗೌಡ್ರ ಅವರು 2022ರ ಮಾ.17ರಂದು ಮೃತಪಟ್ಟಿದ್ದಾರೆ. ಹಾಗಾಗಿ ವಿಮೆ ಹಣವನ್ನು ವಾರಸುದಾರರಿಗೆ ನೀಡುವಂತೆ ಮನವಿ ಮಾಡಿದಾಗ ಅಧಿಕಾರಿಗಳು ಹಣ ನೀಡಲು ಬರುವುದಿಲ್ಲ ಎಂದಿದ್ದಾರೆ’ ಎಂದು ತಿಳಿಸಿದರು.
‘ಖಾತೆ ಬದಲಾವಣೆ ಮಾಡಲು ಒಂದು ವರ್ಷಕ್ಕೂ ಅಧಿಕ ಕಾಲ ಬೇಕಾಗುವುದರಿಂದ ವಿಮೆಯಿಂದ ವಂಚಿತನಾಗಬಾರದು ಎಂದು ಬೆಳೆವಿಮೆ ಕಂತನ್ನು ಕಟ್ಟಲಾಗಿದೆ’ ಎಂದರು.
‘ನಿಮ್ಮ ತಂದೆ ಸತ್ತ ಮೇಲೆ ವಿಮೆ ಕಟ್ಟಲಾಗಿದೆ. ಆದ್ದರಿಂದ ಮಂಜೂರಾದ ಹಣವನ್ನು ಕೊಡಲು ಬರುವುದಿಲ್ಲ ಎಂದು ಹಾವೇರಿ ಜಿಲ್ಲೆಯ ಜಂಟಿ ನಿರ್ದೇಶಕರು ಹೇಳುತ್ತಿದ್ದಾರೆ. ಸರ್ಕಾರವು ವಿಮೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಆ.15 ರಂದು ಹಾವೇರಿಯ ಮಹಾತ್ಮ ಗಾಂಧಿ ಸರ್ಕಲ್ ಹತ್ತಿರ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಸಂಗಮೇಶ ನಾಗನೂರ,ಗುಡ್ಡಪ್ಪ ಕಳಸಪ್ಪನವರ, ಫಕ್ಕೀರಪ್ಪ ಒಡೆಯನಪುರ, ರಾಮಪ್ಪ ಲಮಾಣಿ,ನೀಲಪ್ಪ ಹುಲಗಮ್ಮನವರ, ಸರೋಜಮ್ಮ ಕರ್ಜಗಿ, ಶ್ರೀಕಾಂತಗೌಡ ಮುದಿಗೌಡ್ರ, ಬಸಣ್ಣ ಕಜ್ಜರಿ, ಕೆಂಚನಗೌಡ ಕೆಂಚನಗೌಡ್ರ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.