ರಾಣೆಬೆನ್ನೂರು: ಜಿಲ್ಲೆಯಲ್ಲಿ ಮುಳ್ಳುಸಜ್ಜೆ ಕಳೆಯ ಕಾಟ ವಿಪರೀತವಾಗಿದ್ದು, ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ದೊಡ್ಡ ಹೊಡೆತ ನೀಡಿದೆ. ಮುಳ್ಳುಸಜ್ಜೆ ಕಳೆ ಹೆಚ್ಚಾಗಿದ್ದರಿಂದ ಬೇಸತ್ತ ರೈತರಿಬ್ಬರು, ತಮ್ಮ 9 ಎಕರೆ ಜಮೀನಿನಲ್ಲಿದ್ದ ಗೋವಿನ ಜೋಳವನ್ನು ಸಂಪೂರ್ಣ ನಾಶಪಡಿಸಿದ್ದಾರೆ.
ತಾಲ್ಲೂಕಿನ ಕೂಲಿ ಗ್ರಾಮದ ರೈತ ಕರಬಸಪ್ಪ ಅಗಸೀಬಾಗಿಲ ಅವರು ತಮ್ಮ 4 ಎಕೆರೆ ಹಾಗೂ ಗಿರಿಯಪ್ಪ ಮಲ್ಲಪ್ಪ ಸಣ್ಣಗೂಳಪ್ಪನವರ ಅವರು 5 ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳವನ್ನು ಟ್ರ್ಯಾಕ್ಟರ್ ರೋಟಾವೇಟರ್ ಮೂಲಕ ಸಂಪೂರ್ಣವಾಗಿ ಕಿತ್ತು ಹಾಕಿದ್ದಾರೆ.
ಜಿಲ್ಲೆಯಲ್ಲಿ ಬೆಳೆಗಳ ಪರಿವರ್ತನೆ ಮಾಡದಿರುವುದು, ವಿಪರೀತ ಕಳೆನಾಶಕ ಬಳಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಲವು ಜಮೀನುಗಳಲ್ಲಿ ಮುಳ್ಳುಸಜ್ಜೆ ಕಳೆ ಬೆಳೆಯುತ್ತಿದೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟ ಔಷಧಿ ಇಲ್ಲದಿರುವುದರಿಂದ, ರೈತರು ಕಂಗಾಲಾಗಿದ್ದಾರೆ.
‘ಮುಂಗಾರಿನಲ್ಲಿ ಭೂಮಿ ಹದಗೊಳಿಸಿ ಸುಮಾರು ₹ 70 ಸಾವಿರ ಖರ್ಚು ಮಾಡಿ 4 ಎಕರೆ ಜಮೀನಿನಲ್ಲಿ ಗೋವಿನಜೋಳ ಬಿತ್ತಿದ್ದೇನೆ. ಉತ್ತಮ ಬೆಳೆ ಬರುವ ನೀರಿಕ್ಷೆಯಲ್ಲಿದ್ದೆ. ಆದರೆ, ಈಗ ಗೋವಿನ ಜೋಳದ ಜೊತೆಯಲ್ಲಿಯೇ ಮುಳ್ಳುಸಜ್ಜೆ ಕಳೆಯೂ ಹೆಚ್ಚು ಬೆಳೆಯುತ್ತಿದೆ’ ಎಂದು ರೈತ ಕರಬಸಪ್ಪ ಅಗಸೀಬಾಗಿಲ ತಿಳಿಸಿದರು.
ಮುಳ್ಳುಸಜ್ಜೆ ಕಳೆಗೆ ಔಷಧಿ ಇಲ್ಲವೆಂದು ಹೇಳುತ್ತಿದ್ದಾರೆ. ₹ 70 ಸಾವಿರ ನಷ್ಟ ಮಾಡಿಕೊಂಡು ಸಂಪೂರ್ಣ ಬೆಳೆ ನಾಶಪಡಿಸಿದ್ದೇನೆ.ಕರಬಸಪ್ಪ ಅಗಸೀಬಾಗಿಲ, ರಾಣೆಬೆನ್ನೂರಿನ ಕೂಲಿ ಗ್ರಾಮದ ರೈತ
‘ಇತ್ತೀಚೆಗೆ ₹ 10 ಸಾವಿರ ಖರ್ಚು ಮಾಡಿ ಕಳೆನಾಶಕ ಸಿಂಪಡಿಸಿದ್ದೆ. ಅಷ್ಟಾದರೂ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬಂದಿಲ್ಲ. ಮುಳ್ಳುಸಜ್ಜೆ ಕಳೆಯನ್ನು ಬೇರಿನ ಸಮೇತ ಕೀಳಲು ಕೃಷಿ ಕಾರ್ಮಿಕರು, ಎಕರೆಗೆ ₹ 20 ಸಾವಿರ ಕೇಳುತ್ತಿದ್ದಾರೆ. ಅಷ್ಟು ಹಣ ಕೊಟ್ಟು ಕಳೆ ಕೀಳಿಸಿದರೂ ಇಳುವರಿ ಬರುವುದು ಕಡಿಮೆ. ಹೀಗಾಗಿ, ಬೆಳೆಯನ್ನೇ ನಾಶಪಡಿಸಿದ್ದೇನೆ’ ಎಂದು ಹೇಳಿದರು.
‘ಈ ಮೊದಲು ನಮ್ಮ ಜಮೀನಿನಲ್ಲಿ ರಾಗಿ, ಹತ್ತಿ, ಈರುಳ್ಳಿ ಬೆಳೆಯುತ್ತಿದ್ದೆ. ಆಗ ಮುಳ್ಳುಸಜ್ಜೆ ಕಳೆ ಇರಲಿಲ್ಲ. ಈ ವರ್ಷ ಮುಳ್ಳುಸಜ್ಜೆ ಕಳೆ ಹೆಚ್ಚಾಗಿತ್ತು’ ಎಂದರು.
ಇನ್ನೊಬ್ಬ ರೈತ ಗಿರಿಯಪ್ಪ, ‘ಮುಳ್ಳುಸಜ್ಜೆ ವಿಪರೀತವಾಗಿದೆ. ಹೀಗಾಗಿ, 5 ಎಕರೆ ಜಮೀನಿನಲ್ಲಿದ್ದ ಮೆಕ್ಕೆಜೋಳ ನಾಶಪಡಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.