ಹಾವೇರಿ: ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾದ ಶಿಗ್ಗಾವಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಅಪರಾಧಿ ಅಂದಾನಯ್ಯ ಓಂಪ್ರಕಾಶ ನೀಲಗುಂದಿಮಠ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಆದೇಶ ನೀಡಿದ್ದಾರೆ.
ದುಂಡಸಿ ಗ್ರಾಮದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಅಂದಾನಯ್ಯ ನೀಲಗುಂದಿಮಠ ದೀಪಾ ಅವರನ್ನು ವಿವಾಹವಾಗಿದ್ದ. ಆರೋಪಿಗೆ ₹25 ಸಾವಿರ ನಗದು, ನಾಲ್ಕು ತೊಲೆ ಬಂಗಾರ ಮತ್ತು ₹1 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ದೀಪಾ ಅವರ ತಂದೆಯ ನಿವೃತ್ತಿಯಿಂದ ಬಂದ ಹಣವನ್ನು ತೆಗೆದುಕೊಂಡು ಬಾ, ಧಾರವಾಡದಲ್ಲಿ ನಿವೇಶನ ಹಿಡಿಯೋಣ ಎಂದು ಕಿರುಕುಳ ನೀಡುತ್ತಿದ್ದ. ವಿಚ್ಛೇದನ ಕೊಡುತ್ತೇನೆ ಎಂದು ಹೇಳಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಕಾರಣ ದೀಪಾ ದುಂಡಸಿ ಆರ್.ಎಫ್.ಓ ಕಚೇರಿಯ ಆವರಣದ ತಮ್ಮ ವಸತಿಗೃಹದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮರಣ ಹೊಂದಿದ್ದರು.
ಆರೋಪಿ ವಿರುದ್ಧ ತಡಸ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದೂರು ದಾಖಲಾಗಿತ್ತು. ಶಿಗ್ಗಾವಿ ವೃತ್ತದ ತನಿಖಾಧಿಕಾರಿ ಡಿವೈಎಸ್ಪಿ ವಿಜಯಕುಮಾರ ಆರ್. ಬಿಸ್ನಳ್ಳಿ ತನಿಖೆ ನಡೆಸಿ, ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ. ಕೂಡಲಗಿಮಠ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.