ಕಲಬುರ್ಗಿ: ಅಂಚೆ ಇಲಾಖೆಯಿಂದ ಹೊರತಂದಿರುವ ಶರಣಬಸವಪ್ಪ ಅಪ್ಪ ಅವರ ಭಾವಚಿತ್ರ ಹಾಗೂ ಸಾಧನೆಯ ಕಿರು ಪರಿಚಯ (ಕನ್ನಡ, ಇಂಗ್ಲಿಷ್,ಹಿಂದಿ)ವನ್ನು ಒಳಗೊಂಡ ಅಂಚೆ ಲಕೋಟೆಗಳನ್ನು ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸನ್ ಅವರು ಶರಣಬಸವಪ್ಪ ಅಪ್ಪ ಅವರಿಗೆ ಬುಧವಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ‘ಶರಣಬಸವ ವಿಶ್ವವಿದ್ಯಾಲಯದ ಪ್ರಾರಂಭೋತ್ಸವ, ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ, ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ರಜತ ಮಹೋತ್ಸವ, ಶರಣಬಸವಪ್ಪ ಅಪ್ಪ ಅವರ 83ನೇ ಜನ್ಮ ದಿನದ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆಯು ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ. ಶರಣಬಸವಪ್ಪ ಅಪ್ಪ ಅವರು ವಿಶೇಷ ಅಂಚೆ ಲಕೋಟೆಯ ಮುಖಪುಟದ ಮೇಲೆ ರಾರಾಜಿಸಿದ ಮೊಟ್ಟ ಮೊದಲ ವ್ಯಕ್ತಿಯಾಗಿದ್ದಾರೆ’ ಎಂದು ಬಣ್ಣಿಸಿದರು.
‘ಈ ವಿಶೇಷ ಅಂಚೆ ಲಕೋಟೆಯು ಫಿಲ್ಯಾಟಲಿ ಬ್ಯೂರೋ ಮೂಲಕ ನವದೆಹಲಿಯ ಮುಖ್ಯ ಅಂಚೆ ಕಚೇರಿ ಸೇರಿ ರಾಷ್ಟ್ರದ ಎಲ್ಲ ಮುಖ್ಯ ಅಂಚೆ ಕಚೇರಿಗಳಲ್ಲಿ ಲಭ್ಯ ಇವೆ’ ಎಂದರು.
ಬೆಂಗಳೂರಿನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಅಶ್ವತ್ಥ ನಾರಾಯಣ, ಬೀದರ್ನ ಅಂಚೆ ಅಧಿಕಾರಿ ಮಂಗಳಾ ಭಾಗವತ್, ಕಲಬುರ್ಗಿ ಅಂಚೆ ಇಲಾಖೆ ಹಿರಿಯ ಸೂಪರಿಂಟೆಂಡೆಂಟ್ ಶಿವಾನಂದ ಪಾಟೀಲ, ಸಂತೋಷ ಮಠ, ಅಖ್ತರ್ ಅಲಿ ಮುದ್ಗಲ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ, ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎನ್.ಎಸ್. ದೇವರಕಲ್, ಉಪನ್ಯಾಸಕ ಪ್ರಸಾದ್ ಜಿ.ಕೆ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.