ADVERTISEMENT

ಅಧಿಕ ಆದಾಯಕ್ಕೆ ಹನಿ ನೀರಾವರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 7:03 IST
Last Updated 28 ಅಕ್ಟೋಬರ್ 2017, 7:03 IST

ಅಫಜಲಪುರ: ರೈತರು ವೈಜ್ಞಾನಿಕ ರೀತಿಯಲ್ಲಿ ಬೆಳೆಯನ್ನು ಬೆಳೆಯಲು ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬೇಕಾದರೆ ಹನಿ ನೀರಾವರಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಪಾಟೀಲ ತಿಳಿಸಿದರು.

ತಾಲ್ಲೂಕಿನ ಹವಳಗಾ ಗ್ರಾಮದ ಪ್ರಗತಿಪರ ರೈತರಾದ ವಿಠ್ಠಲ ನಾಟೀಕಾರ ಅವರ ತೋಟದಲ್ಲಿ ಶುಕ್ರವಾರ ಯುಎಸ್‌ 7067 ಹತ್ತಿ ತಳಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ಒಳ್ಳೆಯ ತಳಿಯಾಗಿದ್ದು, ಸರಳವಾಗಿ ಹತ್ತಿಯನ್ನು ಬಿಡಿಸಬಹುದು. ಒಂದು ಗಿಡಕ್ಕೆ ನೂರಕ್ಕೂ ಹೆಚ್ಚು ಹತ್ತಿ ಕಾಯಿಗಳಾಗುತ್ತವೆ. ಗಿಡಗಳು ಬಲಿಷ್ಠವಾಗುತ್ತವೆ. ಗಾಳಿ, ಮಳೆಗೆ ಹಾಳಾಗುವದಿಲ್ಲ ಮತ್ತು ಮಾರುಕಟ್ಟೆಯಲ್ಲಿ ಈ ಹತ್ತಿಗೆ ಹೆಚ್ಚು ಬೇಡಿಕೆಯಿದೆ’ ಎಂದು ವಿವರಿಸಿದರು.

ಪ್ರಗತಿಪರ ರೈತ ವಿಠ್ಠಲ ನಾಟೀಕಾರ ಮಾತನಾಡಿ, ‘ನಾನು ಒಂದು ಎಕರೆಯಲ್ಲಿ ಯುಎಸ್‌ 7067 ಹತ್ತಿ ತಳಿ ನಾಟಿ ಮಾಡಿದ್ದೇನೆ. ಕೇವಲ ಒಂದು ಬಾರಿ ಗೊಬ್ಬರ ಹಾಕಿದ್ದೇನೆ. 2 ಬಾರಿ ರೋಗ ನಿರೋಧಕ ಔಷಧ ಸಿಂಪಡನೆ ಮಾಡಿದ್ದೇನೆ. ಕಾಯಿಗಳು ಬಲಿಷ್ಠವಾಗಿವೆ. ಒಂದು ಗಿಡ 6 – 7 ಅಡಿ ಬೆಳೆದಿದೆ. ನನಗೆ ಒಳ್ಳೆಯ ಆದಾಯ ಬರುತ್ತಿದೆ. ಇದನ್ನೇ ಬೇರೆ ರೈತರು ತಮ್ಮ ತೋಟದಲ್ಲಿ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಕಂಪೆನಿಯ ವಿಭಾಗೀಯ ವ್ಯವಸ್ಥಾಪಕ ತಮ್ಮಣ್ಣಗೌಡ ಪಾಟೀಲ ಮಾತನಾಡಿ, ‘ನಮ್ಮ ಕಂಪೆನಿ 1998ರಲ್ಲಿ ಆರಂಭವಾಗಿದೆ. ನಮ್ಮ ಕಂಪೆನಿ ಹತ್ತಿ ಬೀಜ, ಭತ್ತ, ತರಕಾರಿ ಇತರೆ ಬೀಜಗಳನ್ನು ತಯಾರು ಮಾಡಲಾಗುತ್ತದೆ. 10 ವರ್ಷದವರೆಗೆ ಸಂಶೋಧನೆ ಮಾಡಿ ಯುಎಸ್‌ 7067 ಹೈಬ್ರಿಡ್‌ ಹತ್ತಿ ಬೀಜವನ್ನು ಸಂಶೋಧನೆ ಮಾಡಲಾಗಿದೆ. ವಿಜಯಪುರ, ಕಲಬುರ್ಗಿ, ರಾಯಚೂರ ಜಿಲ್ಲೆಗಳಲ್ಲಿ ಹತ್ತಿ ಬೆಳೆಯಲಾಗುತ್ತಿದೆ’ ಎಂದು ವಿವರಿಸಿದರು.

ಕ್ಷೇತ್ರೋತ್ಸವದಲ್ಲಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ, ಕಂಪೆನಿ ಕ್ಷೇತ್ರಾಧಿಕಾರಿ ಮೊಘಲೇಶ ಗುತ್ತೇದಾರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತರಾದ ಮುತ್ತಪ್ಪ ಪೂಜಾರಿ ಕೊಳ್ಳುರ, ಅಂಬಣ್ಣ ಕೊಸನೂರು, ಶ್ರೀಶೈಲ ಮಾಲಿಗೌಡ ಪಾಟೀಲ, ಅಮೋಘಿ ಪೂಜಾರಿ, ಭೀಮರಾಯ ತಳವಾರ, ಯಲ್ಲಾಲಿಂಗ ಉಕಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.