ADVERTISEMENT

ಚಾಲನಾ ಪರವಾನಗಿಗೆ 14ರ ವರೆಗೆ ಪತ್ರ ಚಳವಳಿ

ಅನಕ್ಷರಸ್ಥರಿಗೂ ಡಿ.ಎಲ್. ನೀಡಲು ರಾಮದಾಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 5:06 IST
Last Updated 3 ಆಗಸ್ಟ್ 2016, 5:06 IST
ಚಾಲನಾ ಪರವಾನಗಿಗಾಗಿ ಅಂಚೆ ಅಭಿಯಾನದ ಅಂಗವಾಗಿ ಬಿಐಡಬ್ಲ್ಯೂಐ ಸಂಸ್ಥೆಯ ಅಧ್ಯಕ್ಷ ಎಸ್.ಎ.ರಾಮದಾಸ್ ಅವರು ಕಲಬುರ್ಗಿಯ ರೋಟರಿ ಶಾಲೆಯ ಆವರಣದಲ್ಲಿ ಆಟೊದಲ್ಲಿ ಕುಳಿತು ಅಂಚೆ ಪತ್ರವನ್ನು ಪ್ರದರ್ಶಿಸಿದರು
ಚಾಲನಾ ಪರವಾನಗಿಗಾಗಿ ಅಂಚೆ ಅಭಿಯಾನದ ಅಂಗವಾಗಿ ಬಿಐಡಬ್ಲ್ಯೂಐ ಸಂಸ್ಥೆಯ ಅಧ್ಯಕ್ಷ ಎಸ್.ಎ.ರಾಮದಾಸ್ ಅವರು ಕಲಬುರ್ಗಿಯ ರೋಟರಿ ಶಾಲೆಯ ಆವರಣದಲ್ಲಿ ಆಟೊದಲ್ಲಿ ಕುಳಿತು ಅಂಚೆ ಪತ್ರವನ್ನು ಪ್ರದರ್ಶಿಸಿದರು   

ಕಲಬುರ್ಗಿ: ಅಸಂಘಟಿತ ವಲಯದ ಅನ ಕ್ಷರಸ್ಥರೂ ವಾಹನ ಚಾಲನೆ ಪರವಾನಗಿ ಪಡೆಯಲು ಮೋಟಾರ್‌ ವಾಹನ ಕಾಯ್ದೆಯ ತಿದ್ದುಪಡಿಗೆ ಒತ್ತಾಯಿಸಿ ಪತ್ರ ಚಳವಳಿ ಆರಂಭಿಸಲಾ ಗಿದ್ದು, ಆಗಸ್ಟ್‌ 14ರವರೆಗೆ ಚಳವಳಿ ನಡೆಯಲಿದೆ ಎಂದು ಅನೌಪಚಾರಿಕ ಕಾರ್ಮಿಕರ ಉಪಕ್ರಮ (ಬಿಐಡಬ್ಲ್ಯೂಐ) ಸಂಸ್ಥೆಯ ಅಧ್ಯಕ್ಷ ಎಸ್‌.ಎ. ರಾಮದಾಸ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ರಾಜ್ಯದ ಎರಡು ಲಕ್ಷ ವಾಹನ ಪರವಾನಗಿ ರಹಿತ ಚಾಲಕರು ತಮ್ಮ ಸಮಸ್ಯೆಗಳನ್ನು ಬರೆದು ಸಹಿ ಹಾಕಿದ ಪತ್ರಗಳನ್ನು ಕಳುಹಿಸಲಿದ್ದಾರೆ.

ಬೀದರ್‌ ನಿಂದ ಪತ್ರ ಚಳವಳಿಗೆ ಚಾಲನೆ ನೀಡಲಾಗಿದೆ. 1 ಸಾವಿರ ಜನ ಪತ್ರ ಕಳುಹಿಸಿದ್ದಾರೆ. ಕಲಬುರ್ಗಿಯಿಂದ ಮಂಗಳವಾರ 2 ಸಾವಿರ ಜನ ಪತ್ರ ಬರೆಯುವರು ಎಂದರು.

ದೇಶದಲ್ಲಿ ಆಟೊ, ಟ್ರ್ಯಾಕ್ಟರ್, ಜೆಸಿಬಿ ಮತ್ತಿತರ ವಾಹನಗಳ ಚಾಲನೆ ಮಾಡು ತ್ತಿರುವ 67 ಲಕ್ಷ ಚಾಲಕರ ಬಳಿ ವಾಹನ ಚಾಲನಾ ಪರವಾನಗಿ ಇಲ್ಲ. ಭದ್ರತೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.

ಭವಿಷ್ಯದ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ವಾಹನ ಚಾಲನೆ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಪಾಸಾಗಿರಬೇಕು ಎನ್ನುವ ಷರತ್ತು ಕೈಬಿಡಬೇಕು. ಪ್ರಾಯೋಗಿಕ ಪರೀಕ್ಷೆ ನಡೆಸಿ, ಪರವಾನಗಿ ಕೊಡಬೇಕು ಎಂದರು.

ಎರಡು ವರ್ಷದ ಹಿಂದೆ ‘ಭಾರತ್‌ ಇನ್‌ಫಾರ್ಮಲ್ ವರ್ಕರ್ಸ್ ಇನಿಶಿಯೇಟಿವ್’ ಸಂಸ್ಥೆ ಹುಟ್ಟು ಹಾಕಲಾ ಗಿದೆ. 10 ರಾಜ್ಯಗಳಲ್ಲಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಪರವಾನಗಿ ರಹಿತ ಚಾಲಕ ರನ್ನು ಸಂಘಟಿಸಲು ಹಾಗೂ ಜಾಗೃತಿ ಮೂಡಿಸಲು ರಾಜ್ಯದ ಆಯ್ದ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊ ಳ್ಳಲಾಗಿದೆ ಎಂದರು.

ಆ.3ರಂದು ವಿಜಯಪುರ, ನಂತರ ಬೆಳಗಾವಿ, ಹುಬ್ಬಳ್ಳಿ, ಶಿರಸಿ, ಬೆಂಗಳೂರು, ಹಾಸನ, ಚಾಮರಾಜ ನಗರ, ಎಚ್‌.ಡಿ.ಕೋಟೆ, ಕೆ.ಆರ್. ನಗರ ಹಾಗೂ 14ರಂದು ಮೈಸೂರಿನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು. 

ಅಸಂಘಟಿತ ವಲಯದಲ್ಲಿ 45 ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಕಟ್ಟಡ ಕಾರ್ಮಿಕರ ಕಲ್ಯಾಣ ಕ್ಕಾಗಿ ಸರ್ಕಾರ ಶೇ1ರಷ್ಟು ಸೇವಾ ತೆರಿಗೆ ಸಂಗ್ರಹಿಸುತ್ತಿದೆ. ರಾಜ್ಯದಲ್ಲಿ ಕೇವಲ 21,986 ಮಂದಿ ನೋಂದಣಿ ಮಾಡಿ ಕೊಂಡಿದ್ದಾರೆ. ನೋಂದಣಿ ಮಾಡಿಕೊ ಳ್ಳುವಂತೆ ಪರವಾನಗಿ ರಹಿತ ಚಾಲಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಪಾಟೀಲ, ವಿಜಯಕುಮಾರ, ವಿದ್ಯಾಸಾಗರ ಕುಲಕರ್ಣಿ, ಚನ್ನವೀರ ಲಿಂಗನಗೌಡ, ಸಂಯೋಜನಾಧಿಕಾರಿ ರವಿಗೊಂಡ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.