ADVERTISEMENT

ಚಿಂಚೋಳಿ: ಹಿಂಗಾರು ಬಿತ್ತನೆ ಶುರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:18 IST
Last Updated 16 ಅಕ್ಟೋಬರ್ 2017, 7:18 IST

ಚಿಂಚೋಳಿ: ತಾಲ್ಲೂಕಿನಲ್ಲಿ ಹಿಂಗಾರು ಬಿತ್ತನೆ ಶುರು ಮಾಡಿದ ರೈತರಿಗೆ ಮಳೆ ಅಡ್ಡಿಯನ್ನುಂಟು ಮಾಡಿದೆ. ಆದರೂ, ಹಿಂಗಾರು ಬಿತ್ತನೆಯ ದಿನಗಳು ಹೋಗಬಾರದೆಂದು ಕೆಲವು ರೈತರು ಜೋಳ ಬಿತ್ತನೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಈಗಾಗಲೇ ಸುಲೇಪೇಟ, ನಿಡಗುಂದಾ ಸುತ್ತಲೂ ಅಲ್ಲಲ್ಲಿ ಕಡಲೆ ಬಿತ್ತಿದ್ದ ರೈತರು ಚಿಮ್ಮನಚೋಡ ಸುತ್ತಲೂ ಹಿಂಗಾರಿನ ಜೋಳ ಬಿತ್ತನೆ ಪ್ರಾರಂಭಿಸಿದ್ದಾರೆ. ಆದರೆ, ಭರಾಟೆಯ ಬಿತ್ತನೆಗೆ ಮಳೆ ಅಡ್ಡಿಯಾಗಿದೆ.

ಮಳೆ ನಿಲ್ಲುತ್ತದೆ ಎಂದು ಇಷ್ಟು ದಿನ ಕಾದಿದ್ದೇವೆ. ಆದರೆ, ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಎರಡು ದಿನ ಬಿಡುವು ನೀಡಿದ್ದರಿಂದ ಭೂಮಿಯ ಮೇಲ್ಭಾಗ ಒಣಗಿ ಕವುಳಾಗಿದೆ. ಇದರಿಂದ ಕೂರಿಗೆ ನಡೆಯುತ್ತಿದ್ದು ಬಿತ್ತನೆ ಭಾನುವಾರದಿಂದಲೇ ಆರಂಭಿಸಿದ್ದಾಗಿ ಕನಕಪುರದ ರೈತ ಶಂಭುಲಿಂಗ ಮೇತ್ರೆ ತಿಳಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ ಮಳೆ ವಿರಾಮ ನೀಡಿದ್ದರೆ ರೈತರು ಬಿತ್ತನೆ ಭರಾಟೆಯಲ್ಲಿ ತೊಡಗಿರುತ್ತಿದ್ದರು. ಆದರೆ, ದಿನ ಬಿಟ್ಟು ದಿನ ಮಳೆ ಸುರಿಯುತ್ತಿರುವುದರಿಂದ ಜೋಳ ಬಿತ್ತನೆ ನಿಧಾನವಾಗಿದೆ. ಈಗಾಗಲೇ ಕಡಲೆ ಬಿತ್ತನೆ ನಡೆಸಿದ ರೈತರ ಹೊಲದಲ್ಲಿ ಬೆಳೆಗಳ ಸಾಲು ಗೋಚರಿಸುತ್ತಿದ್ದು, ಅಧಿಕ ತೇವಾಂಶದಿಂದ ಬೆಳೆ ಸಾಯುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಚಿಮ್ಮನಚೋಡದ ರೈತ ಮುಖಂಡ ರಾಮರೆಡ್ಡಿ ಪಾಟೀಲ ಹೇಳಿದ್ದಾರೆ.

ತೊಗರಿಗೂ ಹಾನಿ:
ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ತೊಗರಿ ಬೆಳೆ ಸಾಯುತ್ತಿದ್ದು, ಹೊಲದಲ್ಲಿ ಅಲ್ಲಲ್ಲಿ ಬೆಳೆ ಬಾಡಿರುವುದು ಕಂಡು ಬಂದಿದೆ ಎಂದು ರೈತ ಬೆನಕೆಪಳ್ಳಿಯ ಪಾಂಡುರಂಗ ತಿಳಿಸಿದ್ದಾರೆ. ಐನಾಪುರ ಸುತ್ತಲೂ ಹೆಚ್ಚು ಮಳೆ ಸುರಿದಿದ್ದರಿಂದ ಹಲವು ರೈತರ ಹೊಲದಲ್ಲಿ ಬೆಳೆ ಹಾಳಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.