ಕಲಬುರ್ಗಿ: ವಿಧಾನಸಭೆ ಚುನಾವಣೆಯಲ್ಲಿ ಲಂಬಾಣಿ ಸಮಾಜಕ್ಕೆ ಆದ್ಯತೆಯೊಂದಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಅಖಿಲ ಭಾರತ ಬಂಜಾರ ಸೇವಾ ಸಂಘದ ಅಧ್ಯಕ್ಷ ಕ್ಷತ್ರು ಎಚ್.ರಾಠೋಡ ಒತ್ತಾಯಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂರು ವಿಧಾನಸಭಾ ಮೀಸಲು ಕ್ಷೇತ್ರ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಲಂಬಾಣಿ ಸಮಾಜಕ್ಕೆ ಎರಡು ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಲಂಬಾಣಿ ಸಮಾಜದ ಪದವೀಧರರಿಗೆ ಟಿಕೆಟ್ ನೀಡಬೇಕು. ಓದು ಬರಹ ಇಲ್ಲದವರಿಗೆ ಟಿಕೆಟ್ ನೀಡಿದರೆ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ. ಜಿಲ್ಲಾ ಲಂಬಾಣಿ ಅಭಿವೃದ್ಧಿ ನಿಗಮದ ಕಚೇರಿಯನ್ನು ಕಾಂಗ್ರೆಸ್ ಶಾಸಕರು ತಮ್ಮ ಮನೆಯಲ್ಲಿ ಇಟ್ಟುಕೊಂಡು ದುರ್ಬಳಿಕೆ ಮಾಡಿಕೊಂಡಿರುವುದು ಖಂಡನೀಯ. ತಕ್ಷಣ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಬಾಳು ರಾಠೋಡ, ತುಲಸಿರಾಮ ಪವಾರ, ಹಣಮಂತ ಚವಾಣ್, ಬಾಬು ಪವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಎಸ್.ಪವಾರ, ಅನಿಲ ರಾಠೋಡ, ಮಲ್ಲಿನಾಥ ರಾಠೋಡ ಇದ್ದರು.
ರಾಮ ದೇವರಿಗೆ ಶಂಖಾಭಿಷೇಕ
ಕಲಬುರ್ಗಿ: ಇಲ್ಲಿನ ಬಿದ್ದಾಪುರ ಕಾಲೊನಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಹುಣ್ಣಿಮೆ ನಿಮಿತ್ತ ಪ್ರಯಾಗ ಮಠದ ವಿದ್ಯಾತ್ಮ ತೀರ್ಥ ಶ್ರೀಪಾದರಿಂದ ಮೂಲ ರಾಮ ದೇವರಿಗೆ ಸಹಸ್ರ ಶಂಖಾಭಿಷೇಕ ನೆರವೇರಿತು.
ವಿಷ್ಣು ಸಹಸ್ರ ನಾಮಾವಳಿಯಿಂದ 60 ಲೀಟರ್ ಕ್ಷೇರಾಭಿಷೇಕ ಮಾಡಲಾಯಿತು. ನವಲಿಕೃಷ್ಣಾಚಾರ್ಯ ನೇತೃತ್ವ ವಹಿಸಿದ್ದರು. ಗುರುರಾಜ ಆಚಾರ್ಯ ಕನಕಗಿರಿ, ನಾರಾಯಣರಾವ, ಬಿ.ಆರ್.ಪಾಟೀಲ, ಕಿಶನರಾವ ಶಹಾಬಾದಕರ್, ಶಾಮಾಚಾರ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.