ಕಲಬುರ್ಗಿ: ಮಕ್ಕಳ ಕಳ್ಳರ ಹಾವಳಿ ಕೇವಲ ವದಂತಿ ಅಷ್ಟೆ. ಜನರು ಇದನ್ನು ನಂಬಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಜೇವರ್ಗಿ, ಸೇಡಂ ಮತ್ತು ಚಿತ್ತಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಆತಂಕಕ್ಕೆ ಒಳಗಾದ ಪಾಲಕರು ಕೆಲವರನ್ನು ಹಿಡಿದು ಥಳಿಸಿದ್ದಾರೆ.
ಆದರೆ ಅವರು ನಿಜವಾದ ಕಳ್ಳರಲ್ಲ. ಬದಲಿಗೆ ಬುದ್ಧಿಮಾಂದ್ಯ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಪಾಲಕರು ಈ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ಗಳಲ್ಲಿ ಆಧಾರವಿಲ್ಲದ ಸಂದೇಶಗಳು ಹರಿದಾಡುತ್ತಿವೆ. ಕೆಲವೆಡೆ ಕಳ್ಳರೆಂದು ಥಳಿಸಿದ ಪ್ರಕರಣಗಳು ವರದಿಯಾಗಿವೆ. ಆದರೆ ಅವರ ಬಗ್ಗೆ ವಿಚಾರಿಸಲಾಗಿ ಅವರು ಮಾನಸಿಕ ಅಸ್ವಸ್ಥರು ಎಂದು ತಿಳಿದು ಬಂದಿದೆ.
ಆದ್ದರಿಂದ ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ಸಂದೇಶಗಳನ್ನು ಹರಡುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ತವ್ಯಕ್ಕೆ ಅಡೆತಡೆ
ಸೇಡಂ ತಾಲ್ಲೂಕು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನ್ನು ಥಳಿಸಲಾಗಿದೆ. 100ಕ್ಕೂ ಹೆಚ್ಚು ಜನರು ಆತನನ್ನು ಠಾಣೆಗೆ ಕರೆತಂದಿದ್ದಾರೆ. ಅವನನ್ನು ವಿಚಾರಣೆಗೆ ಒಳಪಡಿಸಲಾಗಿ ಸೇಡಂ ತಾಲ್ಲೂಕು ಭೂತಪುರ ಗ್ರಾಮದ ಶಿವಲಿಂಗಪ್ಪ ಗುಡಸಿ ಎಂದು ತಿಳಿದು ಬಂದಿದೆ. ಕೋಡ್ಲಾ ಗ್ರಾಮಸ್ಥರು ಕೂಡ ಇದೇ ರೀತಿ ವ್ಯಕ್ತಿಯೊಬ್ಬನನ್ನು ಥಳಿಸಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡೆತಡೆ ಉಂಟುಮಾಡಿದ್ದಾರೆ. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.