ADVERTISEMENT

‘ಕಾಂಗ್ರೆಸ್‌ ಸಾಧನೆ ಜನರಿಗೆ ತಲುಪಿಸಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:01 IST
Last Updated 22 ಮಾರ್ಚ್ 2014, 10:01 IST

ಗುಲ್ಬರ್ಗ: ಕಾಂಗ್ರೆಸ್‌ ಪಕ್ಷವು ಮಾಡಿ­ರುವ ಸಾಧನೆಗಳನ್ನು ಜನರಿಗೆ ಮನ­ವರಿಕೆ ಮಾಡಿಕೊಡುವ ಕೆಲಸವನ್ನು ಮುಖಂಡರು ಮಾಡಬೇಕು ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಗುಲ್ಬರ್ಗ ಲೋಕಸಭೆ ಚುನಾವಣೆ ಪ್ರಚಾರದ ಕಾಂಗ್ರೆಸ್‌ ಪಕ್ಷದ ಕಚೇರಿ-­ಯಲ್ಲಿ ಶುಕ್ರವಾರ ನಡೆದ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದರು.

‘ಸಚಿವನಾಗಿ ನಾನು ಏನು ಅಭಿವೃದ್ಧಿ ಕೆಲಸ ಮಾಡಿರುವೆ ಎಂಬುದನ್ನು ಹೇಳಿ­ಕೊ­ಳ್ಳುವುದು ಮುಖ್ಯವಲ್ಲ. ಮುಖಂ­ಡರು ಆ ಕೆಲಸ ಮಾಡಬೇಕು. ಈ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ­ವನ್ನು ಯಾಚಿಸಬೇಕು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಭೀಮರೆಡ್ಡಿ ಪಾಟೀಲ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದ ಸಚಿ­ವರು ಮಾಡಿರುವ ಅಭಿವೃದ್ಧಿ ಕೆಲಸಗಳ ಜನರ ಕಣ್ಮುಂದೆ ಇವೆ. ಹೀಗಾಗಿ ಜನರ ಹತ್ತಿರ ಹೋಗಿ ಧೈರ್ಯದಿಂದ ಮತ ಯಾಚಿಸುವುದಕ್ಕೆ ಎಲ್ಲರಿಗೂ ನೈತಿಕತೆ ಇದೆ’ ಎಂದರು.

ಪಕ್ಷದ ಮುಖಂಡ ಅಸ್ಗರ್‌ ಅಲಿ ಚುಲ್‌ಬುಲ್‌ ಮಾತನಾಡಿ, ‘ಲೋಕ­ಸಭೆ ಚುನಾವಣೆ ಮುಗಿಯುವವರೆಗೂ ಪಾಲಿಕೆ ಸದಸ್ಯರು ಚುನಾವಣೆ ಪ್ರಚಾರ ಕಾರ್ಯ ಬಿಟ್ಟು ಅನ್ಯ ಕೆಲಸಕ್ಕೆ ಹೋಗಬಾರದು. ಎಲ್ಲರೂ ಬದ್ಧರಾಗಿ ಕೆಲಸ ಮಾಡೋಣ’ ಎಂದರು.

‘ಚುನಾವಣೆಯಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸುವುದಾಗಿ’ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸೈಯದ್‌ ಅಹ್ಮದ್‌, ಅಜ್ಮಲ್ ಗೋಲಾ ಮಾತನಾಡಿದರು. 

ಸಚಿವ ಡಾ. ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ, ಶಾಸಕ ಪ್ರಿಯಾಂಕ ಖರ್ಗೆ, ಮುಖಂಡರಾದ ಇಕ್ಬಾಲ್‌ ಅಹ್ಮದ್‌ ಸರಡಗಿ, ಆಜಮ್‌ ಪಟೇಲ್‌, ಲತಾ ಆರ್‌. ರಾಠೋಡ, ಅನಿದ್‌ ನಿಸಾರ್‌, ಅಬಿಬ್‌ ರೋಜಾ, ಶರಣು ಮೋದಿ, ಶಂಕರ ಸಿಂಗ್‌, ಫಯಾಜ್‌ ಹುಸೇನ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.