ADVERTISEMENT

ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

13ನೇ ಕಲಬುರಗಿ ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ 115 ಮಳಿಗೆಗಳಲ್ಲಿ 1,500 ಕಲಾಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:34 IST
Last Updated 23 ಫೆಬ್ರುವರಿ 2026, 8:34 IST
ಕಲಬುರಗಿಯ ಕನ್ನಡ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರಸಂತೆಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಸೇರಿದಂತೆ ಹಲವರು ವೀಕ್ಷಿಸಿದರು  ಪ್ರಜಾವಾಣಿ ಚಿತ್ರ
ಕಲಬುರಗಿಯ ಕನ್ನಡ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರಸಂತೆಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಸೇರಿದಂತೆ ಹಲವರು ವೀಕ್ಷಿಸಿದರು  ಪ್ರಜಾವಾಣಿ ಚಿತ್ರ   

ಕಲಬುರಗಿ: ಅಲ್ಲಿ ಗಾಯಕ ಗಿಟಾರ್ ‌ಹಿಡಿದು ನಾದ‌ ಲೋಕದಲ್ಲಿ ಮುಳುಗಿದ್ದ. ಗ್ರಾಮೀಣ ಭಾಗದ ‘ಕೌದಿ’ ಬಣ್ಣದಲ್ಲಿ ಮೂಡಿ ಕ್ಯಾನ್ವಾಸ್‌ ಬಂದಿಯಾಗಿತ್ತು. ಬಯಲಲ್ಲಿ ‘ಬಯಲಾದ’ ತುಂಬು‌ ಗರ್ಭಿಣಿ ಚೌಕಟ್ಟಿ ನಲ್ಲಿ ಸೆರೆಯಾಗಿದ್ದಳು. ಕೊಳಲನೂದಿ ಒಂದೆಡೆ ಗೋವುಗಳನ್ನೂ ಇನ್ನೊಂದೆಡೆ ರಾಧೆಯನ್ನೂ ಸೆಳೆದ ‘ಕೃಷ್ಣ’, ಸೀತೆ‌ಗೆ ನೆರವಿನ ಹಸ್ತಚಾಚಿದ ರಾಮ...

ನಗರದ ಕನ್ನಡ ಭವನ ಆವರಣದ ಬಾಪುಗೌಡ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 13ನೇ ಚಿತ್ರಸಂತೆಯಲ್ಲಿ ಕಂಡು ಬಂದ ನೋಟಗಳಿವು. ದೃಶ್ಯ ‌ಬೆಳಕು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಕಾರದಲ್ಲಿ ನಡೆದ ಚಿತ್ರಸಂತೆಯಲ್ಲಿ ಒಟ್ಟು 115 ಮಳಿಗೆಗಳಲ್ಲಿ ಅಂದಾಜು 1,500ರಷ್ಟು ಕಲಾಕೃತಿಗಳು ಪ್ರದರ್ಶನಗೊಂಡಿದ್ದವು.

ಚಿಂದಿಬಟ್ಟೆಗಳನ್ನು ಚೆಂದಾಗಿ ಜೋಡಿಸಿ ಹೊಲಿಯುವ ಕಲೆ ‘ಕೌದಿ’. ಆ ಕೌದಿಯನ್ನು ಕಲಾವಿದೆ ಕವಿತಾ ಎಸ್‌.ಕಟ್ಟೆ ಬಣ್ಣಗಳಲ್ಲಿ ಕ್ಯಾನ್ವಾಸ್‌ ಮೇಲೆ ಮೂಡಿಸಿ ಯುವಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಿದ್ದು ವಿಶೇಷವಾಗಿತ್ತು. ಬೀಸು ಕಲ್ಲು, ಜೋತುಬಿದ್ದ ಕೌದಿ, ಕುಟ್ಟುವ‌ ಒಳಕಲ್ಲು– ಜೋತು ಬಿದ್ದ ಕೌದಿಗಳ ಸಾಲು, ತಲೆಯ‌ ಪೇಟವಾಗಿಯೂ ಕೌದಿ ಬಳಸಿ‌‌ ಚಿತ್ರಿಸಿದ್ದು ಗಮನ ಸೆಳೆಯಿತು.

ADVERTISEMENT

ಅದೊಂದು ಕ್ಯಾನ್ವಾಸ್‌. ಅದಕ್ಕೆ ದುಂಡಾಕಾರವಾಗಿ ಮೊಳೆ ಹೊಡೆಯಲಾಗಿತ್ತು. ಆ ಮೊಳೆಗಳಿಗೆ ದಾರ ಸುತ್ತುತ್ತ ಸುತ್ತುತ್ತ ಅದರಲ್ಲೊಂದು ಮುಖಭಾವ ಮೂಡಿಸಿದ ‘ಥ್ರೆಡ್‌ ಆರ್ಟ್‌’ ವಿಶೇಷ ಎನಿಸಿತು. ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ‌ ಚಿತ್ರಕಲಾ‌ ಕಾಲೇಜಿನ‌‌ ವಿದ್ಯಾರ್ಥಿ ಶ್ರೀಶೈಲ ಭಜಂತ್ರಿ ಈ ವಿಭಿನ್ನ ಪ್ರಯತ್ನ ಮಾಡಿದ್ದರು.

ಶರಣಬಸವಪ್ಪ ಅಪ್ಪ, ದೊಡ್ಡಪ್ಪ ಅಪ್ಪ, ಅಮಿತಾಬ್‌ ಬಚ್ಚನ್, ಹೇಮಾಮಾಲಿನಿ, ಎಪಿಜೆ‌ ಅಬುಲ್ ಕಲಾಂ, ಮದರ್‌ ‌ತೆರೆಸಾ, ಸಚಿನ್‌‌ ತೆಂಡೂಲ್ಕರ್, ರಜಿನಿಕಾಂತ್, ವಿಷ್ಣು ವರ್ಧನ್, ಪುನೀತ ರಾಜಕುಮಾರ್, ವಿರಾಟ‌ ಕೊಹ್ಲಿ ಇತ್ಯಾದಿ ದಿಗ್ಗಜರು  ಕಲಾವಿದ ಮಹೇಶ ಸದಫುಲೆ ಕೈಯಲ್ಲಿ ಪೆನ್ಸಿಲ್‌ನಲ್ಲಿ ಕ್ಯಾನ್ವಾಸ್‌ ಮೇಲೆ ಕಂಗೊಳಿಸುತ್ತಿದ್ದರು.

ದೊಡ್ಡ ಕ್ಯಾನ್ವಾಸ್‌ ಜೋಡಿ ತಾವರೆಗಳು ಅರಳಿ ನಗುತ್ತಿದ್ದವು. ಕಪ್ಪು ಕ್ಯಾನ್ವಾಸ್ ಮೇಲೆ ಬಿಳಿ‌ ಪೆನ್ಸಿಲ್‌ನಲ್ಲಿ ಮೂಡಿದ್ದ ಹುಲಿ, ಚಿರತೆ ಚಿತ್ರಗಳು ನೋಡುಗರ ಚಿತ್ತಾಪಹರಿಸಿದವು. ಸೊಂಡಿಲಿನಲ್ಲಿ ಗಂಟೆ ಹಿಡಿದ ಆನೆ ಸೇರಿದಂತೆ ಹಲವು ಶಿಲ್ಪಕಲಾಕೃತಿಗಳು ಗಮನ ಸೆಳೆದವು.

ರಂಗಮಂದಿರದ ಹೊರಗೆ ದಾನಯ್ಯ ಚೌಕಿಮಠ ತಿರುಗುಣಿ ಮೇಲೆ ಕೆಂಪುಮಣ್ಣಿನ ಮುದ್ದೆ ಪೇರಿಸಿ ಬಂದವರಿಗೆಲ್ಲ ಟೆರ‍್ರಾಕೋಟ ಪ್ರಾತ್ಯಕ್ಷಿಕೆ ನೀಡಿದರು. ತಿರುಗುಣಿ ಮೇಲಿದ್ದ ಮುದ್ದೆ ಮಣ್ಣಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದಿಯಾಗಿ ವಿದ್ಯಾರ್ಥಿಗಳು ನಾಜೂಕಿನಿಂದ ಕರಗಳಾನಿಸಿ  ಕಲಾಕೃತಿ ರಚಿಸಿ ಪುಳಕಿತರಾದರು.

ಇನ್ನುಳಿದಂತೆ ಬಣ್ಣದಲ್ಲಿ‌ ಮೂಡಿದ ಗೂಳಿ, ಚುಕ್ಕೆಗಳಲ್ಲಿ ರೂಪುತಳೆದ ಡಾ.ಬಿ.ಆರ್‌.ಅಂಬೇಡ್ಕರ್, ಬಾಬೂಜಿ, ರೇಖೆಗಳಲ್ಲಿ ಮೂಡಿದ ಪಾದ, ಬಣ್ಣದಲ್ಲಿ ಮೂಡಿದ ಸಿದ್ದೇಶ್ವರ ಶ್ರೀ, ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸೇರಿದಂತೆ ಬುದ್ಧ, ಬೆನಕ, ನಿಸರ್ಗ, ಪಕ್ಷಿಗಳು, ಕಟ್ಟಡಗಳ ಚಿತ್ರಗಳು ಚಿತ್ರ ಸಂತೆ ಮೆರುಗು ಹೆಚ್ಚಿಸಿದವು. ಕೆಲವು ಕಲಾವಿದರು ಸ್ಥಳದಲ್ಲೇ ನೋಡುನೋಡುತ್ತಲೇ ಪ್ರೇಕ್ಷಕರ ಭಾವಚಿತ್ರ ಕ್ಯಾನ್ವಾಸ್‌ ಮೇಲಿ ಳಿಸಿ ಮೆಚ್ಚುಗೆಯನ್ನೂ, ಕಾಸನ್ನೂ ಗಿಟ್ಟಿಸಿದರು.

ಕಲಾವಿದರು ಮನದಲ್ಲಿ ಮೂಡಿದ ಕಲ್ಪನೆಗಳನ್ನು ಕ್ಯಾನ್ವಾಸ್‌ಗಳ ಮೇಲೆ ಬಣ್ಣದಲ್ಲಿ ಪಡಿಮೂಡಿಸಿದ್ದ ಬೆರಗನ್ನು ಕಲಾರಸಿಕರು ಕಣ್ತುಂಬಿಕೊಂಡರು. ‘ವಾಹ್‌’ ಎಂಬ ಮೆಚ್ಚುಗೆಯನ್ನೂ ಕೊಟ್ಟರು. ದಿನವಿಡೀ ನಡೆದ ಚಿತ್ರ ಸಂತೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್‌ ಮೀನಾ ಕುಟುಂಬ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಕುಟುಂಬ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ‘ದೃಶ್ಯ ಕಲೆ’ಯನ್ನು ಆಸ್ವಾದಿಸಿದರು. ದಿನವಿಡೀ ಕಲಾ ಪ್ರೇಮಿಗಳ ದಟ್ಟಣೆ ಕಂಡುಬಂತು.

ಉದ್ಘಾಟನೆ: ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಚಿತ್ರ ಸಂತೆ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಆನಂದ ದಂಡೋತಿ, ರಾಧೆಶ್ಯಾಮ ಠಾಕೂರ, ವಿ.ಬಿ.ಬಿರಾದಾರ, ಎಚ್‌.ಎಂ.ಬೆಳಮಗಿ ವೇದಿಕೆಯಲ್ಲಿದ್ದರು.

ಕಲೆ ಎಂದಿಗೂ ಅಮರ. ಕಲೆ ಬದುಕಿನ ಅಭಿವ್ಯಕ್ತಿಯೇ ಆಗಿದೆ. ಕಲಬುರಗಿ ಜಿಲ್ಲೆ ಪ್ರತಿಭೆಗಳ ಆಗರ. ಅವರ ಪ್ರತಿಭಾ ಪ್ರದರ್ಶನಕ್ಕೆ ಚಿತ್ರಸಂತೆ ಉತ್ತಮ ವೇದಿಕೆ
- ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಬೆಂಗಳೂರು ಬಿಟ್ಟರೆ ನಿರಂತರ ಚಿತ್ರಸಂತೆ ನಡೆಸುತ್ತಿರುವ ಕೀರ್ತಿ ಕಲಬುರಗಿಗೆ ಸಲ್ಲುತ್ತದೆ. 100ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದಾರೆ. ಜನ ಕಲಾಕೃತಿ ಖರೀದಿಸಿ ಬೆಂಬಲಿಸಬೇಕು
– ಎ.ಎಸ್.ಪಾಟೀಲ, ಚೈತನ್ಯಮಯಿ ಟ್ರಸ್ಟ್‌ ನಿರ್ದೇಶಕ
15 ವರ್ಷಗಳ ಹಿಂದೆ ಶುರುವಾದ ಚಿತ್ರಸಂತೆ ಹೆಮ್ಮರವಾಗಿ ಬೆಳೆಯುತ್ತಿದೆ. ಅದಕ್ಕೆ ಸಂಘ–ಸಂಸ್ಥೆಗಳು ಕಲಾವಿದರೆಂಬ ಬೇರುಗಳ ಸಹಕಾರ ಕಾರಣವಾಗಿದೆ
– ರಾಜೀವ‌ ಎಲ್‌.‌ಜಾನೆ, ಹಿರಿಯ ಕಲಾವಿದ
ಈ‌ ಭಾಗದ ಪ್ರತಿಭೆಗಳಿಗೆ ಕಲಬುರಗಿ ಚಿತ್ರಸಂತೆ ಉತ್ತಮ ವೇದಿಕೆ. ಉದ್ಯಮಿಗಳು ಕಲಾವಿದರ ಕಲಾಕೃತಿಗಳನ್ನು ಖರೀದಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು
–ಶರಣು ಪಪ್ಪಾ, ಕೆಕೆಸಿಸಿಐ ಅಧ್ಯಕ್ಷ
ನಾಗರಿಕರಲ್ಲಿ ದೃಶ್ಯ ಕಲೆಯ ಪ್ರಜ್ಞೆ ಮೂಡಿಸುವುದು ನಮ್ಮ ಚಿತ್ರಸಂತೆಯ ಉದ್ದೇಶ. ಈ ಸಲ 800 ಮಕ್ಕಳು‌ ಪಾಲ್ಗೊಂಡಿದ್ದು ಖುಷಿಯ ಸಂಗತಿ
– ಪಿ.ಪರಶುರಾಮ, ಕಲಬುರಗಿ ಚಿತ್ರಸಂತೆ ಸಂಚಾಲಕ

ಮಕ್ಕಳ ಉತ್ಸಾಹ...ಪೋಷಕರ ಸಂಭ್ರಮ

ಚಿತ್ರಸಂತೆಯ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಶಿಸ್ತಿನಿಂದ ಸಾಲಾಗಿ ಕುಳಿತ ಮಕ್ಕಳು ತನ್ಮಯರಾಗಿ ಪೆನ್ಸಿಲ್‌ ಕುಂಚ–ಬಣ್ಣ ಬಳಸಿ ಕಲಾಕೃತಿಗಳನ್ನು ರಚಿಸಿದರು.

1–4ನೇ ತರಗತಿ ಮಕ್ಕಳು ‘ಪರಿಸರ’ ಕುರಿತು ಚಿತ್ರ ಬಿಡಿಸಿದರೆ 5–7ನೇ ತರಗತಿ ಮಕ್ಕಳು ‘ಗ್ರಾಮೀಣ ಜೀವನ’ ಕುರಿತು ಕ್ಯಾನ್ವಾಸ್‌ ಮೇಲೆ ಇಳಿಸಿದರು. 8–10ನೇ ತರಗತಿ ಮಕ್ಕಳು ‘ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು’ ಕುರಿತು ಚಿತ್ರ ಬಿಡಿಸಿ ಬಣ್ಣ ತುಂಬಿದರು. ಚಿತ್ರ ಬಿಡಿಸುವ ಮಕ್ಕಳಿಗಾಗಿ ಸಲಕರಣೆ ಹೊತ್ತು ತಂದ ಪೋಷಕರು ಅವರನ್ನು ಪ್ರೇರೇಪಿಸುತ್ತಿದ್ದರು. ಚಿತ್ರಬಿಡಿಸುವುದನ್ನು ಮೊಬೈಲ್‌ ಫೋನ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.