ADVERTISEMENT

ಕುಡಿವ ನೀರಿಗೆ ₹3 ಕೋಟಿ ಅನುದಾನ; ಶಾಸಕ ಬಸವರಾಜ ಮತ್ತಿಮೂಡ ಹೇಳಿಕೆ

ಸಂಗಮೇಶ್ವರ ಸಂಸ್ಥಾನಮಠದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 4:03 IST
Last Updated 1 ಮೇ 2022, 4:03 IST
ಶಹಾಬಾದ್‌ನ ತೊನಸನಹಳ್ಳಿ (ಎಸ್‌) ಗ್ರಾಮದ ಸಂಗಮೇಶ್ವರ ಮಠದ ಜಾತ್ರೆ ಹಾಗೂ ಗುರು ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭರತ ನಾಟ್ಯ ಕಲಾವಿದರಾದ ಆಕಾಂಕ್ಷಾ, ಸಮೃದ್ಧಿ ಎಂ. ಗೊಳೇದ್ ಅವರಿಗೆ ಸಗರನಾಡಿನ ನಾಟ್ಯ ಮಯೂರ ಪ್ರಶಸ್ತಿ ನೀಡಲಾಯಿತು
ಶಹಾಬಾದ್‌ನ ತೊನಸನಹಳ್ಳಿ (ಎಸ್‌) ಗ್ರಾಮದ ಸಂಗಮೇಶ್ವರ ಮಠದ ಜಾತ್ರೆ ಹಾಗೂ ಗುರು ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭರತ ನಾಟ್ಯ ಕಲಾವಿದರಾದ ಆಕಾಂಕ್ಷಾ, ಸಮೃದ್ಧಿ ಎಂ. ಗೊಳೇದ್ ಅವರಿಗೆ ಸಗರನಾಡಿನ ನಾಟ್ಯ ಮಯೂರ ಪ್ರಶಸ್ತಿ ನೀಡಲಾಯಿತು   

ಶಹಾಬಾದ್: ತೊನಸನಹಳ್ಳಿ(ಎಸ್) ಗ್ರಾಮದ ಕುಡಿಯುವ ನೀರಿಗೆ ₹3 ಕೋಟಿ ಒದಗಿಸಿ, 4-5 ದಿನಗಳಲ್ಲಿ ನೀರಿನ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಭರವಸೆ ನೀಡಿದರು.

ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನಮಠದ ಜಾತ್ರೆ ಹಾಗೂ ಗುರು ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ 15ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಪೈಪಲೈನ್ ಕಾಮಗಾರಿ ಪೂರ್ಣಗೊಂಡಿದೆ. 4–5 ದಿನಗಳಲ್ಲಿ ನೀರು ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ. ಸಂಗಮೇಶ್ವರ ಮಠದ ಅಭಿವೃದ್ಧಿಗೆ ₹10 ಲಕ್ಷ ಅನುದಾನ ಒದಗಿಸಲಾಗಿದೆ. ಮರತೂರ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಅನುದಾನ, ಕಡೆಹಳ್ಳಿ ಗ್ರಾಮದ ರಸ್ತೆಗೆ ₹5 ಕೋಟಿ, ಶಹಾಬಾದ್‌ನ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ವಾಡಿ ವೃತ್ತ ಸಮೀಪದಿಂದ ರೈಲ್ವೆ ಸೇತುವೆ ಬಳಿ ರಸ್ತೆ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ADVERTISEMENT

ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ನಮ್ಮಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಲು ಪುರಾಣ ಮತ್ತು ಪ್ರವಚನಗಳು ಸಹಕಾರಿಯಾಗಿವೆ. ಮನುಷ್ಯರಿಗೆ ಅಹಂಕಾರ ಹೆಚ್ಚಾಗಿದ್ದರಿಂದ ಕೋವಿಡ್ ಬಂದು ಸರಿಯಾದ ಪಾಠ ಕಲಿಸಿದೆ. ಮೂರು ಅಲೆಗಳ ನಡುವೆ ನಾವು ಹೋಗಬಹುದಿತ್ತು. ಪೂಜ್ಯರ ಆಶೀರ್ವಾದ, ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಬದುಕಿದ್ದೇವೆ ಎಂಬುದು ನನ್ನ ನಂಬಿಕೆ ಎಂದರು.

ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ನಿಲಗಲನ ರೇಣುಕ ಶಾಂತಮಲ್ಲ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಳೆಕುಮಟಗಿಯ ಗುರುಸ್ವಾಮಿ ಶರಣರು, ಯರಗಲ್‍ನ ಸಂಗಮನಾಥ ದೇವರು, ಬಿಜೆಪಿ ಶಹಾಬಾದ್ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಯಶ್ರೀ ಮತ್ತಿಮೂಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಉದ್ದಿಮಿ ಮಲ್ಲಿಕಾರ್ಜುನ ಎಸ್.ಗೊಳೇದ್, ಮಹಾದೇವ ಬಂದಳ್ಳಿ, ನಿಂಗಣ್ಣಗೌಡ ಮಾಲಿಪಾಟೀಲ, ವಿರೇಶ ರಾಮಶೆಟ್ಟಿ, ಬಸವರಾಜ ಮದ್ರಿಕಿ ಇದ್ದರು.

ಶಾಸಕ ಬಸವರಾಜ ಮತ್ತಿಮೂಡು ಮತ್ತು ಪತ್ನಿ ಜಯಶ್ರೀ ಬಸವರಾಜ ಮತ್ತಿಮೂಡು ಅವರಿಗೆ ಸಂಗಮೇಶ್ವರ ಪ್ರಶಸ್ತಿ ಹಾಗೂ ಭರತ ನಾಟ್ಯ ಕಲಾವಿದೆ ಕಲಬುರಗಿಯ ಆಕಾಂಕ್ಷಾ ಪುರಣಿಕಮಠ ಹಾಗೂ ತೊನಸನಹಳ್ಳಿ ಗ್ರಾಮದ ಸಮೃದ್ಧಿ ಎಂ. ಗೊಳೇದ್ ಅವರಿಗೆ ಸಗರನಾಡಿನ ನಾಟ್ಯ ಮಯೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.