ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ಅವಘಡದಿಂದ 5 ಎಕರೆಯಲ್ಲಿ ಕಮಲಾಕರ ವಾರದ ಎಂಬುವವರು ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.
ದನ ಮೇಯಿಸುತ್ತಿದ್ದ ಚಂದ್ರಕಾಂತ ಚನ್ನಪ್ಪಗೋಳ ಕಬ್ಬಿಗೆ ಬೆಂಕಿ ಬಿದ್ದಿದ್ದನ್ನು ನೋಡಿದ್ದಾರೆ. ಬೆಂಕಿ ನಂದಿಸಲು ಹರಸಾಹ ಪಟ್ಟಿದ್ದು ಮೈ ಕೈಗೆ ಸುಟ್ಟ ಗಾಯಗಳಾಗಿವೆ. ನಂತರ ಹೊಲದ ಮಾಲೀಕ ಕಮಲಾಕರ ವಾರದ ಅವರಿಗೆ ತಿಳಿಸಿದ್ದಾರೆ. ನಾಲ್ಕೈದು ಜನ ಸೇರಿ ಬೆಂಕಿ ನಂದಿಸಲು ಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕಬ್ಬು ಸುಟ್ಟಕರಕಲಾಗಿತ್ತು.
ಸುಮಾರು 300 ಟನ್ ಕಬ್ಬು ಇಳುವರಿ ಅಂದಾಜಿಸಲಾಗಿತ್ತು, ₹ 7 ಲಕ್ಷ ನಷ್ಟವಾಗಿದೆ. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಸ್ಕಾಂ ಅಧಿಕಾರಿಗಳು ಶನಿವಾರ ಜಮೀನಿಗೆ ಭೇಟಿ ನೀಡಿ ವರದಿ ಮಾಡಿದ್ದಾರೆ.
ಕಬ್ಬ ನಾಟಿ, ನಿರ್ವಹಣೆ ಸೇರಿ ಬಹಳ ಹಣ ಖರ್ಚಾಗಿದೆ. ಕಟಾವಿನ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿ ಎಂದು ರೈತ ಕಮಲಾಕರ ಅಳಲು ತೋಡಿಕೊಂಡರು.
ಗ್ರಾಮದ ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಕೆಳಕ್ಕೆ ಜೋತು ಬಿದ್ದಿದ್ದು, ಹಳವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.