ಸೇಡಂ: ‘ಮಳಖೇಡದ ಕಾಗಿಣಾ ನದಿಗೆ ₹25 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಭಾನುವಾರ ವಿವಿಧ ಕಾಮಗಾರಿಗೆ ಭೂಮಿಪೂಜೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಮಳೆಗಾಲದಲ್ಲಿ ನದಿ ನೀರಿನ ಪ್ರವಾಹದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಸೇತುವೆ ಮುಳುಗಿ ಸಂಕಷ್ಟವನ್ನು ಎದುರಿಸಬೇಕಾ ಗಿತ್ತು. ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ ಮಳಖೇಡನಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರು ಬೇಡಿಕೆ ಇಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ’ ಎಂದರು.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿ, ‘ಮಾರ್ಚ್ 4, 5ರಂದು ಸರ್ಕಾರದಿಂದ ರಾಷ್ಟ್ರಕೂಟರ ಉತ್ಸವವನ್ನು ಆಚರಿಸಲಾಗುತ್ತಿದೆ. ಜನರು ಇದಕ್ಕೆ ಸಹಕರಿಸಬೇಕು. ಇದೊಂದು ಐತಿಹಾಸಿಕ ಮತ್ತು ಉತ್ಸವ ಆಗಲಿದೆ’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ, ಮಳಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ನಂದೂರ, ಗುರುನಾಥರೆಡ್ಡಿ ಪಾಟೀಲ, ನಾಗೇಶ ಹಲಗೇರಿ, ಚೆನ್ನಬಸ್ಸಪ್ಪ ಹಾಗರಗಿ, ದೇವಮ್ಮ ಕರೆಪ್ಪ ಪಿಲ್ಲಿ, ಸುರೇಖಾ ನಾಗರಾಜ ಪೂಜಾರಿ, ಮಹೇಬೂಬ್ ಸಾಬ ದಫೇದಾರ, ಹಾಜಿ ನಾಡೆಪಲ್ಲಿ ಇದ್ದರು. ಸಿದ್ದಯ್ಯಸ್ವಾಮಿ ಸ್ವಾಗತಿಸಿ, ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.