ADVERTISEMENT

ತುರ್ತು ಸ್ಥಿತಿಗೆ ಸ್ಪಂದನೆ: ಎಂಟು ಪೊಲೀಸ್ ವಾಹನಗಳಿಗೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 7:35 IST
Last Updated 5 ಮೇ 2021, 7:35 IST
   

ಕಲಬುರ್ಗಿ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಅಪರಾಧ ಪ್ರಕರಣ, ಗಲಭೆ ಸೇರಿದಂತೆ ತುರ್ತು ಸ್ಥಿತಿಯಲ್ಲಿ ತಕ್ಷಣ ಸ್ಪಂದಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಖರೀದಿಸಲಾದ ಎಂಟು ವಾಹನಗಳಿಗೆ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ‌ಮಾತನಾಡಿದ ರೇವೂರ, ಪ್ರಧಾನಿ ನರೇಂದ್ರ ‌ಮೋದಿ ಹಾಗೂ ‌ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೇಶದಾದ್ಯಂತ ಕಾನೂನು ಸುವ್ಯವಸ್ಥೆ ‌ಪಾಲನೆ ಹಾಗೂ ತುರ್ತು ಪರಿಸ್ಥಿತಿಯ ತಕ್ಷಣದ ಸ್ಪಂದನೆಗಾಗಿ ಇಆರ್ ಎಸ್ಎಸ್ (ಎಮರ್ಜೆನ್ಸಿ ‌ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) ಯೋಜನೆಯಡಿ 112 ಸಂಖ್ಯೆಯನ್ನು ‌ಪರಿಚಯಿಸಿದ್ದಾರೆ. ಕಲಬುರ್ಗಿಯಲ್ಲಿಯೂ ಎಂಟು ವಾಹನಗಳ ಖರೀದಿಗೆ ಪೊಲೀಸ್ ‌ಕಮಿಷನರ್ ಅವರು ಮಂಡಳಿಯಿಂದ ಆರ್ಥಿಕ ನೆರವು ಕೋರಿದ್ದರು. ₹ 1 ಕೋಟಿ ವೆಚ್ಚದಲ್ಲಿ ಸ್ಕಾರ್ಪಿಯೊ ವಾಹನಗಳನ್ನು ‌ಖರೀದಿಸಿ ಕೊಡಲಾಗಿದೆ. ಸಿಗ್ನಲ್ ವ್ಯವಸ್ಥೆ ಬಲವರ್ಧನೆಗಾಗಿ ₹ 1 ಕೋಟಿ ನೀಡಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ನೆರವು ನೀಡಲು ‌ಸಿದ್ಧ' ಎಂದರು.

ಪೊಲೀಸ್ ‌ಕಮಿಷನರ್ ಎನ್. ಸತೀಶಕುಮಾರ್ ಮಾತನಾಡಿ, ಕರೆ ಬಂದ 15 ನಿಮಿಷಗಳಲ್ಲಿ ಪೊಲೀಸರು ಈ ವಾಹನದ ಮೂಲಕ ತೆರಳಬಹುದಾಗಿದೆ. ಬೆಂಗಳೂರಿನ ಕಂಟ್ರೋಲ್ ರೂಮ್ ನಿಂದ ಇವುಗಳನ್ನು ನಿಯಂತ್ರಿಸಲಾಗುತ್ತದೆ. ಅಮೆರಿಕದಲ್ಲಿ ತುರ್ತು ಸ್ಪಂದನೆಗೆ 911 ಸಂಖ್ಯೆ ‌ಇರುವಂತೆ ಭಾರತದಲ್ಲಿ 112 ಸಂಖ್ಯೆ ನೀಡಲಾಗಿದೆ. ಇನ್ನು ಮುಂದೆ 100 ಸಂಖ್ಯೆ ಬದಲು ಪೊಲೀಸ್ ಕಂಟ್ರೋಲ್ ರೂಮ್ ತಲುಪಲು 112 ಸಂಖ್ಯೆಯನ್ನೇ ಬಳಸಬೇಕು. ಈ ಬಗ್ಗೆ ಕೆಲವೇ ದಿನಗಳಲ್ಲಿ ಅಭಿಯಾನ ನಡೆಸಲಿದ್ದೇವೆ ಎಂದರು.

ADVERTISEMENT

ಕೆಕೆಆರ್ ಡಿಬಿ ಕಾರ್ಯದರ್ಶಿ ಹಾಗೂ ‌ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಡಿಸಿಪಿ ಡಿ. ಕಿಶೋರಬಾಬು, ಎಸಿಪಿ ಅಂಶುಕುಮಾರ್ ಹಾಗೂ ‌ವಿವಿಧ ಠಾಣೆಗಳ ಪೊಲೀಸ್ ‌ಇನ್ ಸ್ಪೆಕ್ಟರ್ ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.