ADVERTISEMENT

ನೂತನ ಸಂಸತ್‌ನಲ್ಲಿ ಮಸ್ಕಿ, ಸನ್ನತಿ ಶಾಸನಗಳ ಪ್ರತಿಕೃತಿ

​ಪ್ರಜಾವಾಣಿ ವಾರ್ತೆ
Published 28 ಮೇ 2023, 21:36 IST
Last Updated 28 ಮೇ 2023, 21:36 IST
ದೆಹಲಿಯ ನೂತನ ಸಂಸತ್‌ ಭವನದಲ್ಲಿ ಮಸ್ಕಿಯ ಅಶೋಕನ ಶಾಸನ, ಸನ್ನತಿಯಲ್ಲಿರುವ ಅಶೋಕ ತನ್ನ ಕುಟುಂಬದೊಂದಿಗೆ ಇರುವ ಚಿತ್ರ
ದೆಹಲಿಯ ನೂತನ ಸಂಸತ್‌ ಭವನದಲ್ಲಿ ಮಸ್ಕಿಯ ಅಶೋಕನ ಶಾಸನ, ಸನ್ನತಿಯಲ್ಲಿರುವ ಅಶೋಕ ತನ್ನ ಕುಟುಂಬದೊಂದಿಗೆ ಇರುವ ಚಿತ್ರ   

ಕಲಬುರಗಿ: ನವದೆಹಲಿಯಲ್ಲಿ ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳನ್ನು ಉಲ್ಲೇಖಿಸಲಾಗಿದೆ.

ರಾಯಚೂರು ಜಿಲ್ಲೆ ಮಸ್ಕಿಯಲ್ಲಿರುವ ಅಶೋಕನ ಶಿಲಾಶಾಸನ, ಕಲಬುರಗಿ ಜಿಲ್ಲೆಯ ಸನ್ನತಿಯಲ್ಲಿರುವ ಸಾಮ್ರಾಟ್ ಅಶೋಕನ ಕುಟುಂಬ ಸದಸ್ಯರಿರುವ ಶಿಲ್ಪದ ಪ್ರತಿಕೃತಿ ಹಾಗೂ ಭಾರತದ ನಕ್ಷೆಯಲ್ಲಿ ಕೊಪ್ಪಳದ ಹೆಸರನ್ನು ಉಲ್ಲೇಖಿಸಲಾಗಿದೆ. 

ಸಾಮ್ರಾಟ್ ಅಶೋಕನ ಸ್ಮರಣೆಗಾಗಿ ಸಂಸತ್ತಿನ ಒಂದು ಭಾಗದಲ್ಲಿ ಬೃಹತ್ ಚಿತ್ರವನ್ನು ಅಳವಡಿಸಲಾಗಿದ್ದು, ಇದರಲ್ಲಿ ಮಸ್ಕಿಯ ಶಿಲಾಶಾಸನ, ಸನ್ನತಿಯ ಅಶೋಕ ಸಾಮ್ರಾಟ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಸುಣ್ಣದ ಕಲ್ಲಿನಲ್ಲಿ ಕೆತ್ತಿದ ಉಬ್ಬುಶಿಲ್ಪದ ಚಿತ್ರದ ಪ್ರತಿಕೃತಿಯನ್ನು ಸಂಸತ್ತಿನಲ್ಲಿ ಅಳವಡಿಸಲಾಗಿದೆ.

ADVERTISEMENT

‘ಮೌರ್ಯ, ಶಾತವಾಹನರ ಕಾಲದ ನಕಾಶೆ ಹಾಕಲಾಗಿದ್ದು, ಆ ಕಾಲದಲ್ಲಿ ರಾಜ್ಯದ ಪ್ರಮುಖ ಸ್ಥಳಗಳಾಗಿದ್ದ ರಾಯಚೂರು ಜಿಲ್ಲೆಯ ಮಸ್ಕಿ, ಕೊಪಬಲ್‌ ಎಂದಿರುವ ಕೊಪ್ಪಳದ ಹೆಸರು ಉಲ್ಲೇಖಿಸಲಾಗಿದೆ. ಸನ್ನತಿಯಲ್ಲಿ ಸಿಕ್ಕಿರುವ ಅಶೋಕನ ಶಿಲ್ಪ ಕೂಡ ನಕಾಶೆಯಲ್ಲಿದೆ’ ಎಂದು ಇತಿಹಾಸ ಸಂಶೋಧಕ, ಕೊಪ್ಪಳದ ಡಾ.ಶರಣಬಸಪ್ಪ ಕೋಲ್ಕಾರ ತಿಳಿಸಿದರು.

ಮಸ್ಕಿ ಪಟ್ಟಣದ ಮುದಗಲ್ ರಸ್ತೆ ಬಳಿಯ ಗುಡ್ಡದ ಬಂಡೆಯ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಶೋಕ‌ನ ಶಿಲಾಶಾಸನ ಕೆತ್ತಲಾಗಿದ್ದು, 1915ರಲ್ಲಿ ಎಂಜಿನಿಯರ್ ಸಿ. ಬಿಡನ್ ಇದನ್ನು ಪತ್ತೆ ಹಚ್ಚಿದ್ದರು.

‘ಈ ಶಾಸನದಲ್ಲಿ ‘ದೇವನಾಂಪ್ರಿಯ ಅಸೋಕ ಸ’ ಎಂದು ಉಲ್ಲೇಖಿಸಲಾಗಿದೆ. ಇದು ಅಶೋಕನ ಮೊದಲ ಶಾಸನ’ ಎಂದು ಇತಿಹಾಸ ಸಂಶೋಧಕ ಡಾ‌.ಚನ್ನಬಸ್ಸಯ್ಯ ಹಿರೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.