ಕಲಬುರ್ಗಿ: ನಗರದ ಹೊರವಲಯದ ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ 742.23 ಎಕರೆ ಪ್ರದೇಶವನ್ನು ಶುಕ್ರವಾರ ಜಿಲ್ಲಾಧಿಕಾರಿ ಬಿ.ಶರತ್ ಅವರು ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ (ಎಎಐ) ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಮತ್ತು ಜಂಟಿ ಜನರಲ್ ಮ್ಯಾನೇಜರ್ ಎಂ.ಯಾದಯ್ಯ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು 567.10 ಎಕರೆ, ಕಲಬುರ್ಗಿ ಉಪವಿಭಾಗಾಧಿಕಾರಿ 127.30 ಎಕರೆ ಹಾಗೂ ಕಲಬುರ್ಗಿ ತಹಶೀಲ್ದಾರರು 48.23 ಎಕರೆ ಸೇರಿದಂತೆ ಒಟ್ಟಾರೆ 742.23 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಎಎಐ ಮಧ್ಯೆ ನಡುವೆ ನಡೆದ ಪರಸ್ಪರ ಒಪ್ಪಂದದಂತೆ ವಿಮಾನ ನಿಲ್ದಾಣದ ಅಷ್ಟೂ ಪ್ರದೇಶದ ಭೌತಿಕ ಹಂಚಿಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಬಿ.ಶರತ್ ಮಾತನಾಡಿ, ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿರುವುದರಿಂದ ಕೂಡಲೇ ವಾಣಿಜ್ಯ ಹಾರಾಟ ಪ್ರಾರಂಭಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜ್ಞಾನೇಶ್ವರ ರಾವ್ ಅವರಿಗೆ ತಿಳಿಸಿದರು. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣಪ್ಪ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್, ಕಲಬುರ್ಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ್, ಶಿರಸ್ತೇದಾರ ಗಂಗಾಧರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.