
ಆಳಂದ: ‘ಮಠಗಳು ಕೇವಲ ಭಕ್ತರ ಪರಂಪರೆಯಲ್ಲ, ಧಾರ್ಮಿಕ ಬೋಧನೆ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಮನುಷ್ಯನ ಜೀವನವನ್ನು ಸುಸಂಸ್ಕೃತ, ಸಾರ್ಥಕ ಮತ್ತು ಸನ್ಮಾರ್ಗದತ್ತ ಕೊಂಡೊಯ್ಯುವ ಕಲ್ಯಾಣದ ಕೇಂದ್ರಗಳಾಗಿವೆ’ ಎಂದು ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಪ್ರವಚನ ಮತ್ತು ಮಹಾಮಂಗಲ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
‘ಶರಣರು, ಸಂತರು ಮತ್ತು ಮಹಾಂತರ ವಚನ ಸಾಹಿತ್ಯ ಹಾಗೂ ಬೋಧನೆಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತೇವೆ ಎಂದ ಅವರು, ಇಂದಿನ ಯುವ ಪೀಳಿಗೆ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಸಂತೆಕೆಲ್ಲೂರ ಫಿರೋಜಾಬಾದ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ‘ಆಧ್ಯಾತ್ಮಿಕ ಮಾರ್ಗವು ಮನುಷ್ಯನ ಜೀವನಕ್ಕೆ ಶಾಂತಿ ಮತ್ತು ಸ್ಥೈರ್ಯ ನೀಡುತ್ತದೆ. ಮಠಗಳ ಪೀಠಾಧಿಪತಿಗಳು ಭಕ್ತರ ಬಾಳಿಗೆ ಬೆಳಕಾಗಿ ಸನ್ಮಾರ್ಗ ತೋರಿಸುತ್ತಿದ್ದಾರೆ’ ಎಂದು ಹೇಳಿದರು.
ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಪರಂಪರೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಆಳಂದ ಹಿರೇಮಠದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಹರಸೂರ ಕರಸಿದ್ಧೇಶ್ವರ ಕಲ್ಮಠದ ಕರಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಆಳಂದ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಉಪಸ್ಥಿತರಿದ್ದರು. ತೋಳನೂರಿನ ಸಿದ್ಧಯ್ಯಾ ಶಾಸ್ತ್ರಿಯವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಿತು. ಕಲಾವಿದ ಶಿವಶರಣಪ್ಪ ಪೂಜಾರಿ ಸಂಗೀತಕ್ಕೆ, ಅಶೋಕ ಆಳಂದ ಸಾಥ್ ನೀಡಿದರು.
ಸಮಾರಂಭದಲ್ಲಿ ಅಪ್ಪಾರಾವ ದೇಶಮುಖ, ಧನೇಶ ದೇಶಮುಖ ಹಿರೋಳಿ, ಬೆಂಗಳೂರಿನ ಚಂದುರಾವ ದೇಶಮುಖ, ಕಲಬುರಗಿ ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಸಂಜಯ ಎಸ್.ರೆಡ್ಡಿ, ಎಚ್ಕೆಇ ಪ್ರಾಚಾರ್ಯ ಎ.ಬಿ.ಹೊಸಮನಿ, ನಿಜಲಿಂಗಪ್ಪ ಕೊರಳ್ಳಿ ಸೇರಿದಂತೆ ಜಾಲವಾದಿ, ನಂದವಾಡಗಿ, ಹತ್ತರಗಾ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.