ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುತ್ತಿದೆ. ಅನ್ಯ ವಿಚಾರಧಾರೆ, ಸಮಾಜ ಘಾತುಕ ಕೃತ್ಯಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಹೇಳಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇರುವುದು ರಾಷ್ಟ್ರೀಯವಾದವೇ ಹೊರತು ಕೋಮುವಾದ ಅಲ್ಲ. ವಿದ್ಯಾರ್ಥಿಗಳ ಹಕ್ಕು ಆಗಿರುವ ವಿದ್ಯಾರ್ಥಿ ಸಂಘಟನೆಯ ಸ್ವಾತಂತ್ರ್ಯ ಹಾಗೂ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕಾರಿ ನಿಲುವುವನ್ನು ಎಬಿವಿಪಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ಪರಿಷತ್ನಂತಹ ಸಂಘಟನೆಯ ಸದಸ್ಯತ್ವವನ್ನು ಹೊಂದಿ ಕೆಲಸ ಮಾಡುವುದು ಯಾವ ಅರ್ಥದಲ್ಲಿ ಕೋಮುವಾದ ಆಗುತ್ತದೆ? ಸ್ವಾಮಿ ವಿವೇಕಾನಂದರಿಗೆ ಅವಮಾನವಾದಾಗ ವಿರೋಧಿಸುವುದು ಕೋಮುವಾದವೇ? ವಿದ್ಯಾರ್ಥಿಗಳ ಮೇಲೆ ಕೆಲವರು ಹಲ್ಲೆ ಮಾಡಿದಾಗ ಪ್ರಶ್ನಿಸಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿರುವುದು ಕೋಮುವಾದವೇ ಎಂದು ಪ್ರಶ್ನಿಸಿದ್ದಾರೆ.
ಸಿಯುಕೆ ಸ್ಥಳೀಯವಾಗಿ ನೂರಾರು ಜನರಿಗೆ ಉದ್ಯೋಗ ದೊರೆಯಲು ಕಾರಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವಂತೆ ಮಾಡಿದೆ. ಇಂತಹ ಉತ್ತಮ ವಾತಾವರಣಕ್ಕೆ ಕಪ್ಪು ಚುಕ್ಕೆ ತರುವ ನಿಲುವನ್ನು ವಿದ್ಯಾರ್ಥಿ ಪರಿಷತ್ ವಿರೋಧಿಸುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.